ಕ್ಯಾನ್ಸರ್ ಚಿಕಿತ್ಸೆಗೆ ಪಾಕ್ ಮಗುವಿಗೆ ಅವಕಾಶ ಮಾಡಿಕೊಟ್ಟ ಗಂಭೀರ್
Team Udayavani, Oct 20, 2019, 5:02 AM IST
ಹೊಸದಿಲ್ಲಿ: ಗಂಭೀರ ಅನಾರೋಗ್ಯ ಹೊಂದಿರುವ ಪಾಕಿಸ್ಥಾನೀಯರಿಗೆ ಭಾರತದಲ್ಲಿ ಚಿಕಿತ್ಸೆ ಪಡೆಯಲು ಅವಕಾಶ ನೀಡಿರುವ ಹಲವು ಉದಾಹರಣೆಗಳ ಮಧ್ಯೆಯೇ, ಇದೀಗ ಮತ್ತೂಂದು ಇಂಥದ್ದೇ ಮಾನವೀಯ ನೆರವು ಭಾರತದಿಂದ ವ್ಯಕ್ತವಾಗಿದೆ.
ಕ್ಯಾನ್ಸರ್ ಪೀಡಿತ ಒಮೈಮಾ ಅಲಿ ಎಂಬ ಬಾಲಕಿಗೆ ಭಾರತದಲ್ಲಿ ಚಿಕಿತ್ಸೆ ಪಡೆಯಲು ಅವಕಾಶ ನೀಡುವಂತೆ ದೆಹಲಿಯ ಬಿಜೆಪಿ ಸಂಸದ ಗೌತಮ್ ಗಂಭೀರ್, ವಿದೇಶಾಂಗ ಸಚಿವಾಲಯವನ್ನು ಕೋರಿದ್ದರು. ಇದಕ್ಕೆ ವಿದೇಶಾಂಗ ಸಚಿವ ಎಸ್. ಜೈಶಂಕರ್ ಧನಾತ್ಮಕವಾಗಿ ಸ್ಪಂದಿಸಿ, ಒಮೈಮಾ ಹಾಗೂ ಆಕೆಯ ಹೆತ್ತವರಿಗೆ ಭಾರತಕ್ಕೆ ಆಗಮಿಸಲು ಸೂಕ್ತ ವೀಸಾ ಒದಗಿಸಿಕೊಡುವಂತೆ ಇಸ್ಲಾಮಾ ಬಾದ್ನಲ್ಲಿರುವ ಭಾರತದ ಹೈಕಮಿಷನರ್ಗೆ ಸೂಚಿಸಿದ್ದಾರೆ. ಈ ಬಗ್ಗೆ ಗೌತಮ್ ಗಂಭೀರ್ ಟ್ವಿಟರ್ನಲ್ಲಿ ವಿದೇಶಾಂಗ ಸಚಿ ವಾಲಯದ ಪತ್ರವನ್ನು ಪ್ರಕಟಿ ಸಿದ್ದಾರೆ. ಈ ಹಿಂದೆ ವಿದೇ ಶಾಂಗ ಸಚಿವೆಯಾಗಿ ಸುಷ್ಮಾ ಸ್ವರಾಜ್ ಇದ್ದಾಗ, ಪಾಕ್ನ ಹಲವರಿಗೆ ಭಾರತಕ್ಕೆ ಆಗಮಿಸಿ ಚಿಕಿತ್ಸೆ ಪಡೆಯಲು ನೆರವು ನೀಡಿದ್ದರು. ಭಾರತ ಮತ್ತು ಪಾಕಿಸ್ಥಾನದ ಸಂಬಂಧ ದಿನದಿಂದ ದಿನಕ್ಕೆ ಹಳಸುತ್ತಿದ್ದರೂ ಈ ರೀತಿಯ ಮಾನವೀಯ ಸಂಬಂಧದ ಉದಾಹರಣೆಗಳು ಹೆಚ್ಚುತ್ತಿವೆ.