ಒಂದು ಕೋಟಿ ರೂ. ನಗದು ಬೇಡ; ಪ್ರಶಸ್ತಿ ಫಲಕ ಮಾತ್ರ ಸಾಕು: ಗೀತಾ ಪ್ರಸ್ ಪ್ರತಿಕ್ರಿಯೆ
ಸಂಸ್ಥೆಗೆ ಪ್ರತಿಕ್ರಿಯೆ ನೀಡಿದ್ದಕ್ಕೆ ಕಾಂಗ್ರೆಸ್ ಆಕ್ಷೇಪ
Team Udayavani, Jun 20, 2023, 8:00 AM IST
ಗೋರಖ್ಪುರ/ನವದೆಹಲಿ: ಪ್ರತಿಷ್ಠಿತ ಗಾಂಧಿ ಶಾಂತಿ ಪುರಸ್ಕಾರಕ್ಕೆ ಆಯ್ಕೆಯಾಗಿರುವ ಗೋರಖ್ಪುರದ ಗೀತಾ ಮುದ್ರಣಾಲಯ ಒಂದು ಕೋಟಿ ರೂ. ನಗದು ಸ್ವೀಕರಿಸಲು ನಿರಾಕರಿಸಿದೆ. ಪ್ರಶಸ್ತಿ ಫಲಕವನ್ನು ಮಾತ್ರ ಸ್ವೀಕರಿಸುವುದಾಗಿ ಹೇಳಿದೆ. ಪ್ರಶಸ್ತಿ ಮೊತ್ತವನ್ನು ಇತರ ಉತ್ತಮ ಕಾರ್ಯಗಳಿಗೆ ಬಳಕೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡುವುದಾಗಿ ತಿಳಿಸಿದೆ.
ಇದೇ ವೇಳೆ, ಗೀತಾ ಮುದ್ರಣಾಲಯಕ್ಕೆ ಗಾಂಧಿ ಶಾಂತಿ ಪ್ರಶಸ್ತಿ ನೀಡಲು ತೀರ್ಮಾನಿಸಿದ್ದಕ್ಕೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಟೀಕಿಸಿದ್ದಾರೆ. “ಇದೊಂದು ವಿಡಂಬನಾತ್ಮಕ ನಿರ್ಧಾರ. ವಿ.ಡಿ.ಸಾವರ್ಕರ್ ಮತ್ತು ನಾಥೂರಾಮ್ ಗೋಡ್ಸೆಗೆ ಗಾಂಧಿ ಶಾಂತಿ ಪ್ರಶಸ್ತಿ ನೀಡಿದರೆ ಯಾವ ರೀತಿ ಆಭಾಸವಾಗುತ್ತದೋ ಅದೇ ರೀತಿಯಾಗಿದೆ. 2015ರಲ್ಲಿ ಇದೇ ಪ್ರಕಾಶನ ಸಂಸ್ಥೆ ಲೇಖಕ ಅಕ್ಷಯ ಮುಖೀ ಅವರು ಬರೆದ ಪುಸ್ತಕವನ್ನು ಪ್ರಕಟಿಸಿತ್ತು. ಅದರಲ್ಲಿ ಮಹಾತ್ಮ ಗಾಂಧಿ ಮತ್ತು ಪ್ರಕಾಶನ ಸಂಸ್ಥೆ ವಿವಿಧ ವಿಚಾರಗಳ ಬಗ್ಗೆ ಹೊಂದಿದ್ದ ಭಿನ್ನಾಭಿಪ್ರಾಯಗಳ ಕುರಿತು ವಿವರವಾಗಿ ಪ್ರಕಟಿಸಿತ್ತು’ ಎಂದು ಟ್ವೀಟ್ ಮಾಡಿದ್ದಾರೆ.
ಅದಕ್ಕೆ ತಿರುಗೇಟು ನೀಡಿದ ಪಾಟ್ನಾ ಸಂಸದ ರವಿಶಂಕರ ಪ್ರಸಾದ್, ಕಾಂಗ್ರೆಸ್ ಮಾವೋವಾದಿ ಮನೋಭಾವನೆ ಹೊಂದಿದೆ ಎಂದು ಟೀಕಿಸಿದ್ದಾರೆ. ರಾಮ ಮಂದಿರ ನಿರ್ಮಾಣಕ್ಕೆ ಆಕ್ಷೇಪ ಮಾಡಿದ ಪಕ್ಷದಿಂದ ಇನ್ನೇನನ್ನು ನಿರೀಕ್ಷಿಸಲು ಸಾಧ್ಯ? ಗೀತಾ ಪ್ರಸ್ಗೆ ಗಾಂಧಿ ಶಾಂತಿ ಪ್ರಶಸ್ತಿ ನೀಡುವುದನ್ನು ವಿರೋಧಿಸುತ್ತಿರುವುದು, ಕಾಂಗ್ರೆಸ್ನವರು ಮಾವೋವಾದಿ ಚಿಂತನೆಗಳಿಂದ ಪ್ರಭಾವಿತರಾಗಿದ್ದಾರೆ ಎಂದು ಹೇಳಿದ್ದಾರೆ.