Goa ಭ್ರಷ್ಟಾಚಾರಕ್ಕೆ ಕಡಿವಾಣ ಬೀಳಲಿದೆ: ಸಿಎಂ ಪ್ರಮೋದ ಸಾವಂತ್
Team Udayavani, Mar 15, 2024, 6:11 PM IST
ಪಣಜಿ: ಗೋವಾದಲ್ಲಿ ಭ್ರಷ್ಟಾಚಾರ ಹೆಚ್ಚಿದೆ ಎಂಬ ದೂರುಗಳಿವೆ. ಇದು ನಿಜವಾಗಿದ್ದರೂ, ನಾವು ಈ ಆಡಳಿತದ ಮೂಲಕ ಅದನ್ನು ತಡೆಯಲು ಪ್ರಯತ್ನಿಸುತ್ತಿದ್ದೇವೆ. ಈ ವ್ಯವಸ್ಥೆಯ ಮೂಲಕ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಎಲ್ಲ ರೀತಿಯ ಪ್ರಯತ್ನ ಮಾಡುತ್ತಿದ್ದೇವೆ ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ್ ನುಡಿದರು.
ಮಡಗಾಂವ್ನಲ್ಲಿ ವಿಕಾಸ್ ಭಾರತ್ ಸಂಕಲ್ಪ ಯಾತ್ರೆಯಲ್ಲಿ ಮುಖ್ಯಮಂತ್ರಿಗಳು ನಾಗರಿಕರೊಂದಿಗೆ ಸಂವಾದ ನಡೆಸಿ ಅವರು ಮಾತನಾಡಿದರು. ಸರ್ಕಾರಿ ಇಲಾಖೆಗಳಲ್ಲಿನ ಭ್ರಷ್ಟಾಚಾರದ ವಿರುದ್ಧ ಕೆಲವು ನಾಗರಿಕರು ಧ್ವನಿ ಎತ್ತಿದರು. ಮಡಗಾಂವ್ನಲ್ಲಿ ಶೈಕ್ಷಣಿಕ ಸಂಕೀರ್ಣ ನಿರ್ಮಾಣ ವಿಳಂಬವಾಗುತ್ತಿರುವ ಬಗ್ಗೆ ಮುಖ್ಯಮಂತ್ರಿ ಸಾವಂತ್ ಅವರನ್ನು ನಾಗರೀಕರು ಪ್ರಶ್ನಿಸಿದರು, ಈ ಕುರಿತು ಉತ್ತರಿಸಿದ ಸಿಎಂ ಸಾವಂತ್ ಪ್ರಕ್ರಿಯೆ ನಡೆಯುತ್ತಿದ್ದು, ಶೀಘ್ರವೇ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಭರವಸೆ ನೀಡಿದರು.
ವಿಕಾಸ್ ಭಾರತ್, ಮೋದಿ ಕಿ ಗ್ಯಾರಂಟಿ ಮತ್ತು ಸಂಕಲ್ಪ ಪತ್ರ ಅಭಿಯಾನಗಳ ಜಾಗೃತಿ ಮತ್ತು ಪ್ರಚಾರಕ್ಕಾಗಿ ಮುಖ್ಯಮಂತ್ರಿ ಡಾ.ಪ್ರಮೋದ್ ಸಾವಂತ್ ದಕ್ಷಿಣ ಗೋವಾಕ್ಕೆ ಭೇಟಿ ನೀಡಿದರು.
ದಕ್ಷಿಣ ಗೋವಾದ ಐದು ಕ್ಷೇತ್ರಗಳಾದ ಫೊಂಡಾ, ಕುಡ್ಚಡೆ, ಸಾಂಗೆ, ಕುಡ್ತರಿ ಮತ್ತು ಮಡಗಾಂವ್ ಕ್ಷೇತ್ರಗಳಿಗೆ ಭೇಟಿ ನೀಡಿದ ಅವರು ವಿವಿಧ ಕ್ಷೇತ್ರಗಳ ಸಾವಿರಾರು ಜನರೊಂದಿಗೆ ಸಂವಾದ ನಡೆಸಿದರು. ಕ್ರೈಸ್ತರು ಕೂಡ ಬಿಜೆಪಿಯಲ್ಲೇ ಇರುವಂತೆ ಮನವಿ ಮಾಡಿದರು.
ಈ ಭೇಟಿಯ ಸಂದರ್ಭದಲ್ಲಿ ಅವರು ಪ್ರಧಾನಿ ನರೇಂದ್ರ ಮೋದಿಯವರ ಅಭಿವೃದ್ಧಿ ಭಾರತ, ಸ್ವಾವಲಂಬಿ ಭಾರತ ಮತ್ತು ಮಹಿಳೆಯರು, ಯುವ ಶಕ್ತಿ ಮತ್ತು ಬಡವರ ಕಲ್ಯಾಣದ ಪರಿಕಲ್ಪನೆಯನ್ನು ಪ್ರಸ್ತುತಪಡಿಸಿದರು ಎಂದು ಹೇಳಿದರು. ಅವರು ಜನರ ಸಮಸ್ಯೆಗಳನ್ನು ಮತ್ತು ಅವರು ಸರ್ಕಾರದಿಂದ ನಿಖರವಾಗಿ ಏನನ್ನು ನಿರೀಕ್ಷಿಸುತ್ತಾರೆ ಎಂಬುದನ್ನು ಸಹ ತಿಳಿದುಕೊಂಡರು ಎಂದು ಹೇಳಿದರು.
ಎಸ್ಟಿ ಸಮುದಾಯದ ಅಭಿವೃದ್ಧಿಗೆ ಕಾಂಗ್ರೆಸ್ ಏನೂ ಮಾಡಿಲ್ಲ. ಭಾರತೀಯ ಜನತಾ ಪಕ್ಷ (ಬಿಜೆಪಿ) ಮಾತ್ರ ಗಾವಡೆ, ಕುಣಬಿ ಮತ್ತು ವೇಳಿಪ ಸಮುದಾಯಗಳಿಗೆ ಎಸ್ಟಿ ಸ್ಥಾನಮಾನ ನೀಡಿದೆ ಎಂದು ಹೇಳಿದರು. ಕಾಂಗ್ರೆಸ್ ಕೇವಲ ಕ್ರಿಶ್ಚಿಯನ್ ಸಮುದಾಯದಲ್ಲಿ ಭಾರತೀಯ ಜನತಾ ಪಕ್ಷದ ಬಗ್ಗೆ ಭಯವನ್ನು ಹರಡಿತು ಮತ್ತು ಧರ್ಮಗಳ ನಡುವೆ ಒಡಕು ಮೂಡಿಸಲು ಪಿತೂರಿ ನಡೆಸಿತು. ಗೋವಾದ ಸಮಗ್ರ ಅಭಿವೃದ್ಧಿಗೆ ತಮ್ಮ ಸರಕಾರ ಶ್ರಮಿಸುತ್ತಿದ್ದು, ಸರಕಾರ ಮತ್ತು ವಿರೋಧ ಪಕ್ಷಗಳ ಶಾಸಕರೆಂಬ ಭೇದಭಾವವಿಲ್ಲದೆ ಎಲ್ಲ ಕ್ಷೇತ್ರಗಳ ಅಭಿವೃದ್ಧಿಗೆ ಒತ್ತು ನೀಡುವುದಾಗಿ ಹೇಳಿದರು.
ಕೇಂದ್ರ ಹಾಗೂ ರಾಜ್ಯ ಮಟ್ಟದಲ್ಲಿ ಬಿಜೆಪಿ ಸರಕಾರ ತನ್ನ ಅಧಿಕಾರಾವಧಿಯಲ್ಲಿ ಜಾರಿಗೆ ತಂದಿರುವ ಜನಪರ ಪಾದಯಾತ್ರೆಯ ಬಗ್ಗೆಯಾಗಲಿ, ವಿವಿಧ ಕಲ್ಯಾಣ ಯೋಜನೆಗಳ ಬಗ್ಗೆಯಾಗಲಿ ಕಾಂಗ್ರೆಸ್ ಯೋಚಿಸಿಲ್ಲ. ಭಾರತೀಯ ಜನತಾ ಪಕ್ಷದ (ಬಿಜೆಪಿ) ಕಾರ್ಯಕರ್ತರು ಪ್ರತಿ ಮನೆಗೆ ತೆರಳಿ ಜನರ ಅಗತ್ಯತೆ ಮತ್ತು ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳುತ್ತಿದ್ದಾರೆ. 10 ವರ್ಷದಲ್ಲಿ ಗೋವಾದಲ್ಲಿ 35 ಸಾವಿರ ಕೋಟಿ ರೂ.ಅಭಿವೃದ್ಧಿ ಕಾರ್ಯಕ್ಕೆ ಖರ್ಚು ಮಾಡಲಾಗಿದೆ.ಸಮಾಜ ಕಲ್ಯಾಣಕ್ಕೆ ಪ್ರತ್ಯೇಕ ನಿಧಿ ಇದೆ ಎಂದು ಮುಖ್ಯಮಂತ್ರಿ ಪ್ರಮೋದ ಸಾವಂತ್ ಮಾಹಿತಿ ನೀಡಿದರು.