ಪಿಪಿಎಫ್ ಖಾತೆದಾರರಿಗೆ ಖುಷಿ
ಭಾರೀ ಬದಲಾವಣೆ ತಂದ ಕೇಂದ್ರ ಸರಕಾರ
Team Udayavani, Dec 18, 2019, 6:15 AM IST
ಹೊಸದಿಲ್ಲಿ: ಸಾರ್ವಜನಿಕರ ಭವಿಷ್ಯ ನಿಧಿ (ಪಿಪಿಎಫ್) ನಿಯಮಾವಳಿಗಳಿಗೆ ಸಂಬಂಧಿಸಿದಂತೆ ಕೇಂದ್ರ ಸರಕಾರ ಹೊಸ ನೀತಿಯನ್ನು ಜಾರಿಗೊಳಿಸಿದೆ. ಮಹತ್ವದ ಐದು ಬದಲಾವಣೆಗಳ ಜತೆಯಲ್ಲಿ ಹೊಸದಾಗಿ ರೂಪಿಸಲಾಗಿರುವ ಎಲ್ಲ ನಿಯಮಗಳೂ ಮಂಗಳವಾರದಿಂದಲೇ ಜಾರಿಗೊಂಡಿವೆ.
ಭವಿಷ್ಯ ನಿಧಿ ಖಾತೆಯಲ್ಲಿರುವ ಶೇ. 50ರಷ್ಟು ಹಣವನ್ನು ಖಾತೆ ತೆರೆದ ನಾಲ್ಕು ವರ್ಷಗಳು ಮುಗಿದ ಕೂಡಲೇ ಹಿಂಪಡೆಯಲು ಅವಕಾಶ ನೀಡಲಾಗಿದೆ. ಈ ಹಿಂದೆ ಏಳು ವರ್ಷಗಳ ಅನಂತರ ಶೇ. 25ರಷ್ಟು ಹಣವನ್ನು ಹಿಂಪಡೆಯುವ ನಿಯಮವಿತ್ತು. ಇದರ ಜತೆಗೆ ಖಾತೆದಾರನು ಯಾವುದೇ ಸಾಲ ಹೊಂದಿದ್ದಲ್ಲಿ ಆ ಹಣಕ್ಕೆ ಪೂರಕವಾಗಿ ಭವಿಷ್ಯ ನಿಧಿಯಲ್ಲಿನ ಆತನ ಹಣವನ್ನು ಮುಟ್ಟುಗೋಲು ಹಾಕಿಕೊಳ್ಳುವಂತಿಲ್ಲ.
ಅಪ್ತಾಪ್ತ ವಯಸ್ಕರ ಹೆಸರಿನಲ್ಲಿ ಖಾತೆ ತೆರೆಯಲು ಹೊಸ ಅವಕಾಶ ನೀಡಲಾಗಿದೆ. ಖಾತೆದಾರನು ಅಪ್ರಾಪ್ತ ವಯಸ್ಕನಾಗಿದ್ದರೆ ಆತನ ಹೆಸರಿನಲ್ಲಿ ಕೇವಲ ಒಂದು ಖಾತೆ ಮಾತ್ರ ಇರಬೇಕು. ಜಂಟಿ ಖಾತೆಯನ್ನೂ ತೆರೆಯಬಹುದು. ವಿಶೇಷ ಕಾಳಜಿ ನೀಡಬೇಕಾದ ವ್ಯಕ್ತಿಗಳ ಬದಲು ಅವರ ಪೋಷಕರು ಖಾತೆ ತೆರೆಯಲು ಅವಕಾಶ ಕಲ್ಪಿಸಲಾಗಿದೆ. ಇದರ ಜತೆಗೆ ಸಾರ್ವಜನಿಕ ಭವಿಷ್ಯ ನಿಧಿಯ (ಪಿಪಿಎಫ್) ಮೆಚ್ಯುರಿಟಿ ಅವಧಿಯು 15 ವರ್ಷಗಳಾಗಿದ್ದು ಅದು ಮುಗಿದ ಅನಂತರವೂ ಖಾತೆದಾರರು ಮುಂದಿನ ಐದು ವರ್ಷಗಳವರೆಗೆ ಹಾಗೂ ಅದಕ್ಕೂ ಮುಂದಕ್ಕೆ ಐದು ವರ್ಷಗಳ ಲೆಕ್ಕಾಚಾರದಲ್ಲಿ ಖಾತೆ ಗಳನ್ನು ಮುಂದುವರಿಸುತ್ತಾ ಹೋಗಲು ಅನುಕೂಲ ಕಲ್ಪಿಸಲಾಗಿದೆ.