ಆಟವಾಡುತ್ತಾ ನಾಪತ್ತೆಯಾದ ಬಾಲಕಿಯ ಮೃತದೇಹ ಚರಂಡಿಯಲ್ಲಿ ಕೈಕಾಲು ಕಟ್ಟಿದ ಸ್ಥಿತಿಯಲ್ಲಿ ಪತ್ತೆ
Team Udayavani, Mar 6, 2024, 1:48 PM IST
ಪುದುಚೇರಿ: ಎರಡು ದಿನಗಳಿಂದ ನಾಪತ್ತೆಯಾಗಿದ್ದ ಒಂಬತ್ತು ವರ್ಷದ ಬಾಲಕಿಯ ಮೃತದೇಹ ಪುದುಚೇರಿಯ ಚರಂಡಿಯಿಂದ ಕೈ ಕಾಲುಗಳನ್ನು ಹಗ್ಗದಲ್ಲಿ ಕಟ್ಟಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಶನಿವಾರ ಬಾಲಕಿ ಮನೆಯ ಬಳಿ ಆಟವಾಡುತ್ತಿದ್ದಾಗ ಇದ್ದಕಿದ್ದಂತೆ ನಾಪತ್ತೆಯಾಗಿದ್ದಳು, ನಂತರ ಆಕೆಯ ಪೋಷಕರು ಮನೆಯ ಸುತ್ತಮುತ್ತ ಹುಡುಕಾಡಿದ್ದಾರೆ ಆದರೆ ಬಾಲಕಿ ಎಲ್ಲಿಯೂ ಪತ್ತೆಯಾಗಲಿಲ್ಲ ಗಾಬರಿಗೊಂಡ ಪೋಷಕರು ಠಾಣೆಗೆ ತೆರಳಿ ಮಗಳು ನಾಪತ್ತೆಯಾಗಿರುವ ಬಗ್ಗೆ ದೂರು ನೀಡಿದ್ದಾರೆ. ಪ್ರಕರಣದ ದಾಖಲಿಸಿಕೊಂಡ ಪೊಲೀಸರು ಬಾಲಕಿಯ ಪತ್ತೆಗೆ ತಂಡವನ್ನು ರಚಿಸಿ ಪತ್ತೆ ಕಾರ್ಯಕ್ಕೆ ಮುಂದಾಗಿದ್ದಾರೆ.
ಇದಾದ ಎರಡು ದಿನಗಳ ಬಳಿಕ ಬಾಲಕಿಯ ಕೊಳೆತ ಶವ ಆಕೆಯ ನಿವಾಸದ ಬಳಿಯ ಚರಂಡಿಯಲ್ಲಿ ಕೈಕಾಲು ಕಟ್ಟಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಘಟನೆಯಿಂದ ಎಚ್ಚೆತ್ತ ಗ್ರಾಮದ ಜನರು ಬಾಲಕಿಯ ಹತ್ಯೆಗೈದ ದುಷ್ಕರ್ಮಿಗಳನ್ನು ಕೂಡಲೆ ಪತ್ತೆಹಚ್ಚುವಂತೆ ರಸ್ತೆ ತಡೆ ನಡೆಸಿದರು ಅಲ್ಲದೆ ಗ್ರಾಮದಲ್ಲಿರುವ ಮಹಿಳೆಯರ ಹಾಗೂ ಮಕ್ಕಳ ಸುರಕ್ಷತೆಗೆ ಪೊಲೀಸರು ಮುಂದಾಗಬೇಕು ಕೂಡಲೇ ಆರೋಪಿಗಳನ್ನು ಬಂಧಿಸಿ ಕಠಿಣ ಶಿಕ್ಷೆ ನೀಡಬೇಕೆಂದು ಆಗ್ರಹಿಸಿದರು.
ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಸಿಸಿಟಿವಿ ವಿಡಿಯೋಗಳನ್ನು ಪರಿಶೀಲಿಸಿ ಅನುಮಾನದ ಹಿನ್ನೆಲೆಯಲ್ಲಿ ಐವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: Mangaluru: ಬಜರಂಗದಳ ಪ್ರಾಂತ ಸಹ ಸಂಯೋಜಕ ಮುರಳಿಕೃಷ್ಣ ಹಸಂತಡ್ಕ ಬಂಧನ: ಬಜರಂಗದಳ ಖಂಡನೆ