ರೈತರ ಆತ್ಮಹತ್ಯೆಗೂ, ಹೇಮಾಮಾಲಿನಿ ‘ಡ್ರಿಂಕ್ಸ್’ ಗೂ ಏನ್ ಸಂಬಂಧ! ವಿವಾದ
Team Udayavani, Apr 14, 2017, 5:45 PM IST
ಮುಂಬೈ: ರೈತರ ಆತ್ಮಹತ್ಯೆಗೆ ಮದ್ಯಸೇವನೆ ಕಾರಣ ಎಂಬ ವಿಷಯಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರದ ಪಕ್ಷೇತರ ಶಾಸಕ ಓಂಪ್ರಕಾಶ್ ಬಾಬಾರಾವ್ ಕಾಡಾ ಅಲಿಯಾಸ್ ಬಚ್ಚು ಕಾಡಾ ಬಿಜೆಪಿ ಸಂಸದೆ ಹೇಮಾಮಾಲಿನಿ ಹೆಸರನ್ನು ಸೇರಿಸಿ ನೀಡಿದ ಹೇಳಿಕೆ ವಿವಾದಕ್ಕೆ ಎಡೆಮಾಡಿಕೊಟ್ಟಿದೆ.
ರೈತರು ಮದ್ಯ ಸೇವನೆಯಿಂದಾಗಿ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ ಎಂದು ಜನರು ಆರೋಪಿಸುತ್ತಾರೆ. ಇದು ನಿಜಕ್ಕೂ ಸಮಂಜಸವಲ್ಲ ಎಂದಿರುವ ಶಾಸಕ, ಯಾರು ಮದ್ಯಪಾನ ಮಾಡುವುದಿಲ್ಲ ಹೇಳಿ? ಶೇ.75ರಷ್ಟು ಶಾಸಕರು, ಸಂಸದರು, ಪತ್ರಕರ್ತರು ಕೂಡಾ ಮದ್ಯ ಸೇವಿಸುತ್ತಾರೆ. ಅಷ್ಟೇ ಅಲ್ಲ ನಟಿ ಹೇಮಾ ಮಾಲಿನಿ ಪ್ರತಿದಿನ ಮದ್ಯ ಸೇವಿಸ್ತಾರೆ, ಆದರೆ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆಯೇ? ಎಂದು ಪ್ರಶ್ನಿಸಿದ್ದಾರೆ.
ಗುರುವಾರ ನಾಂದೇಡ್ ನಲ್ಲಿ ಸಾರ್ವಜನಿಕ ಸಮಾರಂಭವೊಂದರಲ್ಲಿ ಭಾಗವಹಿಸಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡುತ್ತ ಈ ಹೇಳಿಕೆ ಕೊಟ್ಟಿದ್ದಾರೆ. ರೈತರ ಸಾವಿಗೆ ಮದ್ಯಸೇವನೆ ಕಾರಣವಲ್ಲ ಎಂಬುದನ್ನು ಸಾರಸಗಟಾಗಿ ತಿರಸ್ಕರಿಸಿದ ಬಚ್ಚು ಕಾಡು, ರೈತರ ಆತ್ಮಹತ್ಯೆಗೆ ಹಣದ ಕೊರತೆ, ಅವರ ಉತ್ಪಾದನೆ ಹೆಚ್ಚುತ್ತಿದೆ ವಿನಃ, ಆದಾಯ ಅಲ್ಲ ಎಂದು ವಿಶ್ಲೇಷಿಸಿದ್ದಾರೆ.
ಪಕ್ಷೇತರ ಶಾಸಕ 46ರ ಹರೆಯದ ಓಂಪ್ರಕಾಶ್ ಬಾಬಾರಾವ್ ಕಾಡಾ ವಿವಾದಗಳಿಂದಲೇ ಹೆಸರು ಗಳಿಸಿದ್ದು, ಕಳೆದ ವರ್ಷ ಸರ್ಕಾರಿ ಅಧಿಕಾರಿಯೊಬ್ಬರ ಮೇಲೆ ಹಲ್ಲೆ ನಡೆಸಿ ಬಂಧನಕ್ಕೀಡಾಗಿದ್ದರು ಎಂದು ವರದಿ ತಿಳಿಸಿದೆ.