‘ಒಳ ಉಡುಪು’ ಹೇಳಿಕೆ: ಸಿಎಂ ಹೇಮಂತ್ ಸೋರೆನ್ ಸಹೋದರನ ವಿವಾದ
Team Udayavani, Sep 8, 2022, 4:43 PM IST
ರಾಂಚಿ: ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೋರೆನ್ ಅವರ ಸಹೋದರ ಮತ್ತು ಜೆಎಂಎಂ ಶಾಸಕ ಬಸಂತ್ ಸೋರೆನ್ ಅವರು ಹೇಳಿಕೆಯ ಮೂಲಕ ವಿವಾದಕ್ಕೆ ಸಿಲುಕಿ ಉರಿಯುವ ಬೆಂಕಿಗೆ ತುಪ್ಪ ಸುರಿಯುವ ಕೆಲಸ ಮಾಡಿದ್ದಾರೆ.
ಇಬ್ಬರು ಅಪ್ರಾಪ್ತ ವಯಸ್ಕ ಬಾಲಕಿಯರ ಸತತ ಎರಡು ಕೊಲೆಗಳು ನಡೆದ ದುಮ್ಕಾಕ್ಕೆ ಭೇಟಿ ನೀಡದಿರುವುದನ್ನು ಕೀಳು ಮಟ್ಟದ ಹೇಳಿಕೆಯ ಮೂಲಕ ಸಮರ್ಥಿಸುವ ಮೂಲಕ ಬಸಂತ್ ಸೋರೆನ್ ಮತ್ತೊಮ್ಮೆ ವಿವಾದಕ್ಕೆ ಸಿಲುಕಿದ್ದಾರೆ.
ಬಸಂತ್ ಸೋರೆನ್ ಅವರು ಬುಧವಾರ ಮೃತರ ಕುಟುಂಬಗಳನ್ನು ಭೇಟಿ ಮಾಡಿದರು. ಕಳೆದ ಕೆಲವು ದಿನಗಳಿಂದ ದುಮ್ಕಾದಲ್ಲಿ ಏಕೆ ಕಾಣಿಸಿಕೊಂಡಿಲ್ಲ ಎಂಬ ಪ್ರಶ್ನೆಗೆ, ”ಒಳ ಉಡುಪು ಖರೀದಿಸಲು ದೆಹಲಿಗೆ ಹೋಗಿದ್ದೆ. ನನ್ನ ಒಳಉಡುಪುಗಳು ಚಿಕ್ಕದಾಗಿದ್ದರಿಂದ ನಾನು ಅವುಗಳನ್ನು ಖರೀದಿಸಲು ದೆಹಲಿಗೆ ಹೋಗಿದ್ದೆ” ಎಂದು ಎಂದಿನ ಶೈಲಿಯಲ್ಲಿ ಹೇಳಿದರು. ಯಾವಾಗಲೂ ಒಳ ಉಡುಪುಗಳನ್ನು ದೆಹಲಿಯಿಂದ ಖರೀದಿಸುತ್ತೀರಾ ಎಂಬ ಇನ್ನೊಂದು ಪ್ರಶ್ನೆಗೆ ಅವರು ಹೌದು ಎಂದು ಉತ್ತರಿಸಿದರು.
ಮೊದಲಿಗೆ, 17 ವರ್ಷದ ಶಾಲಾ ಬಾಲಕಿ ತನ್ನ ನೆರೆಹೊರೆಯ ಶಾರುಖ್ ಸ್ನೇಹದ ಪ್ರಸ್ತಾಪವನ್ನು ನಿರಾಕರಿಸಿದ್ದಕ್ಕಾಗಿ ತನ್ನ ಮನೆಯಲ್ಲಿ ಮಲಗಿದ್ದಾಗ ಕಿಟಕಿಯಿಂದ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲಾಗಿತ್ತು. ಎರಡನೆಯದಾಗಿ, 14 ವರ್ಷದ ಬುಡಕಟ್ಟು ಹುಡುಗಿಯನ್ನು ಹಲವು ತಿಂಗಳುಗಳ ಕಾಲ ಅತ್ಯಾಚಾರವೆಸಗಿ ಮನೆಯಿಂದ ಹಲವಾರು ಕಿಲೋಮೀಟರ್ ದೂರದಲ್ಲಿ ಕೊಂದು ನಂತರ ಮರಕ್ಕೆ ನೇಣು ಹಾಕಲಾಗಿತ್ತು.