ಬತ್ತಿದ ನದಿಯಲ್ಲಿ ಚಿಮ್ಮಿತು ಜೀವಜಲ; ಇದು ಗ್ರಾಮಸ್ಥರ ಶ್ರಮದ ಫಲ
Team Udayavani, May 8, 2017, 9:50 AM IST
ಆಲಪ್ಪುಝ: ಇದು ಕೈಗಾರಿಕೆ, ಮರಳು ಮಾಫಿಯಾದ ಕೈಗೆ ಸಿಲುಕಿ ಬತ್ತಿ ಹೋಗಿದ್ದ ನದಿ ಮರುಜನ್ಮ ಪಡೆದ ಕಥೆ. ಈ ಜೀವಜಲದ ಮರುಹರಿವಿನಲ್ಲಿ ಗ್ರಾಮಸ್ಥರ ಬೆವರಿದೆ, ಮಹಿಳೆಯರ ಅವಿರತ ಶ್ರಮವಿದೆ. ಹೌದು. ಅದು ಕೇರಳದ ಆಲಪ್ಪುಝ ಜಿಲ್ಲೆಯ ಕುಟ್ಟೆಂಪೆರೂರ್ ನದಿ. ಒಂದು ಕಾಲದಲ್ಲಿ ಮೈದುಂಬಿ ಹರಿಯುತ್ತಿದ್ದ ನದಿ, 2 ದಶಕದಿಂದ ಹತ್ತಿರ ಸುಳಿಯಲೂ ಸಾಧ್ಯವಾಗದ ಪರಿಸ್ಥಿತಿಗೆ ಬಂದಿತ್ತು. ಒಂದೆಡೆ ಅಕ್ರಮ ಮರಳು ಗಣಿಗಾರಿಕೆಯು ನದಿಯ ಒಡಲನ್ನು ಬರಿದಾಗಿಸಿದರೆ, ನಿರ್ಮಾಣ ಕಾಮಗಾರಿಗಳ ಟನ್ಗಟ್ಟಲೆ ತ್ಯಾಜ್ಯಗಳು, ನದಿಯೊಳಗಣ ಜಲಚರಗಳನ್ನು ನಾಶ ಮಾಡಿತ್ತು. 120 ಅಡಿ ಅಗಲವಿದ್ದ ನದಿಯು 20 ಅಡಿಗೆ ಸಂಕುಚಿತಗೊಂಡು, ರೋಗ ಹರಡುವ ತಾಣವಾಗಿ ಮಾರ್ಪಾಟಾಯಿತು.
ಒಂದಾದರು ಗ್ರಾಮಸ್ಥರು: ತುಂಬಿ ತುಳುಕುತ್ತಿದ್ದ ನದಿಯಲ್ಲಿ ಈಜಾಡುತ್ತಾ, ಅದರ ದಡದಲ್ಲಿ ಆಡುತ್ತಾ ಬೆಳೆದಿದ್ದ ಗ್ರಾಮಸ್ಥರಿಗೆ ಅದರ ಸ್ಥಿತಿ ನೋಡಲಾಗಲಿಲ್ಲ. ಜತೆಗೆ, ನೀರಿನ ಕೊರತೆಯೂ ತೀವ್ರವಾಗತೊಡಗಿತು. ಇದಕ್ಕೊಂದು ಪರಿಹಾರ ಕಂಡುಕೊಳ್ಳಲೇಬೇಕು ಎಂಬ ದೃಢ ನಿರ್ಧಾರಕ್ಕೆ ಬಂದು, 700ರಷ್ಟು ಗ್ರಾಮಸ್ಥರು ಅದರಲ್ಲೂ ಹೆಚ್ಚಿನವರು ಮಹಿಳೆಯರು ನದಿಗೆ ಇಳಿದೇ ಬಿಟ್ಟರು. ಪ್ರಾಣವನ್ನೇ ಪಣಕ್ಕಿಟ್ಟು, ಕುಟ್ಟೆಂಪೆರೂರ್ ನದಿಯ ಒಡಲಲ್ಲಿ ತುಂಬಿದ್ದ ಅಪಾಯಕಾರಿ ತ್ಯಾಜ್ಯಗಳು, ಪ್ಲಾಸ್ಟಿಕ್ಗಳು, ಆಲ್ಗೆಗಳನ್ನು ಹೊರತೆಗೆಯಲಾರಂಭಿಸಿದರು. ಒಂದೆರಡಲ್ಲ, ಬರೋಬ್ಬರಿ 70 ದಿನಗಳ ಕಾಲ ಈ ಕೆಲಸ ನಡೆಯಿತು. ಡೆಂಗ್ಯೂಯಂಥ ರೋಗಗಳು ಜತೆಯಾದರೂ ಅವರು ಎದೆಗುಂದಲಿಲ್ಲ. ಒಂದೆರಡು ದಿನ ವಿರಮಿಸಿ, ಮತ್ತೆ ಕೆಲಸ ಆರಂಭಿಸಿದರು. ಉದ್ಯೋಗ ಖಾತ್ರಿ ಯೋಜನೆಯನ್ನೂ ಇದಕ್ಕಾಗಿ ಬಳಸಿದರು.
45ನೇ ದಿನಕ್ಕೆ ಹರಿವು ಆರಂಭ
45 ದಿನಗಳ ಬಳಿಕ ಇವರ ಸತತ ಪರಿಶ್ರಮದ ಫಲ ಕಾಣಲಾರಂಭಿಸಿತು. ನಿಧಾನವಾಗಿ ನೀರಿನ ಹರಿವು ಹೆಚ್ಚತೊಡಗಿತು. 70 ದಿನ ತುಂಬುತ್ತಿದ್ದಂತೆ ಜೀವಜಲ ಮೊದಲಿನಂತೆ ಉಕ್ಕತೊಡಗಿತು. ಜೀವನಾಡಿಗೆ ಪುನಶ್ಚೇತನ ನೀಡಿದ ಗ್ರಾಮಸ್ಥರು ಕುಣಿದು ಕುಪ್ಪಳಿಸಿದರು. ಈಗ ಕುಟ್ಟೆಂಪೆರೂರ್ ನದಿಗೆ ಮರುಜೀವ ಸಿಕ್ಕಿದೆ.