ಗಡಿ ಉದ್ವಿಗ್ನತೆ ನಡುವೆಯೇ ಮದುವೆಯಾದ ಪಾಕ್ ವಧು, ಭಾರತೀಯ ವರ
Team Udayavani, Mar 9, 2019, 2:07 PM IST
ಪಟಿಯಾಲ : ಭಾರತ ಮತ್ತು ಪಾಕಿಸ್ಥಾನದ ನಡುವಿನ ಉದ್ವಿಗ್ನತೆ ಮುಂದುವರಿದಿರುವ ಹೊರತಾಗಿಯೂ ಪಾಕ್ ವಧು, ಭಾರತೀಯ ವರನನ್ನು ಎಸ್ಜಿಪಿಸಿ ನಡೆಸುತ್ತಿರುವ ಇಲ್ಲಿನ ಗುರುದ್ವಾರದಲ್ಲಿ ಮದುವೆಯಾಗಿದ್ದಾರೆ. ಇದು ಉಭಯ ದೇಶಗಳ ಜನರ ನಡುವಿನ ಭಾವನಾತ್ಮಕ ಸಂಬಂಧ ಎಷ್ಟು ತೀವ್ರವಾಗಿದೆ ಎಂಬುದರ ದ್ಯೋತಕವೆಂದು ತಿಳಿಯಲಾಗಿದೆ.
ಪಾಕಿಸ್ಥಾನದ ಕಿರಣ್ ಸರ್ಜಿತ್ ಕೌರ್ (27) ಅವರು ಹರಿಯಾಣದ ಅಂಬಾಲಾ ಜಿಲ್ಲೆಯ ತೇಪ್ಲಾ ಗ್ರಾಮದ ಪರವೀಂದರ್ ಸಿಂಗ್ (33) ಅವರನ್ನು ಸಿಕ್ಖ್ ಸಂಪ್ರದಾಯದ ಪ್ರಕಾರ ಶ್ರೀ ಖೇಲ್ ಸಾಹಿಬ್ ಗುರುದ್ವಾರದಲ್ಲಿ ಮದುವೆಯಾದರು.
ತನ್ನ ಮದುವೆಗಾಗಿ ಫೆ.23ರೊಳಗೆ ಪಟಿಯಾಲಾ ತಲುಪಲು ಕಿರಣ್ ಸರ್ಜಿತ್ ಕೌರ್ ಬಯಸಿದ್ದರು. ಆದರೆ ಪುಲ್ವಾಮಾ ಉಗ್ರ ದಾಳಿಯ ಕಾರಣ ಭಾರತ – ಪಾಕ್ ಉದ್ವಿಗ್ನತೆ ತೀವ್ರಗೊಂಡದ್ದರಿಂದ ಆಕೆಗೆ ಪಟಿಯಾಲಾಗೆ ಬರಲು ಅಸಾಧ್ಯವಾಯಿತು.
ಕೊನೆಗೂ ಆಕೆ 45 ದಿನಗಳ ವೀಸಾ ಪಡೆದು ಸಂಜೋತಾ ಎಕ್ಸ್ಪ್ರೆಸ್ ಮೂಲಕ ಮೊನ್ನೆ ಗುರುವಾರ ತನ್ನ ಮದುವೆಗಾಗಿ ಪಟಿಯಾಲಾ ತಲುಪಿದಳು. ಅಂತೆಯೇ ಮದುವೆ ಸಾಂಗವಾಗಿ ನಡೆಯಿತು.