ಅಂಚೆ ಕಚೇರಿಗೆ ಕರೆ ಮಾಡಿ ಹಣ ಪಡೀರಿ ; ಹಣದೊಂದಿಗೆ 15 ನಿಮಿಷಗಳಲ್ಲಿ ಸಿಬಂದಿ ಮನೆಗೆ ಹಾಜರ್
Team Udayavani, Apr 29, 2020, 6:12 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ದಿಗ್ಬಂಧನದ ಅವಧಿಯಲ್ಲಿ ಮನೆಬಿಟ್ಟು ಹೊರ ಹೋಗಲು ಸಾಧ್ಯವಿಲ್ಲ. ಬ್ಯಾಂಕಿನಲ್ಲಿ ದುಡ್ಡಿದ್ದರೂ ಹಿಂದೆಗೆದುಕೊಳ್ಳಲಾಗದ ಸ್ಥಿತಿ ಇದೆ. ಇಂತಹ ಹೊತ್ತಿನಲ್ಲಿ ಭಾರತೀಯ ಅಂಚೆ ಇಲಾಖೆ, ಎಇಪಿಎಸ್ ಸಾಧನದ ಮೂಲಕ ಜನರಿಗೆ ಹಣ ತಲುಪಿಸುವ ಸೇವೆ ಶುರು ಮಾಡಿದೆ. ನೀವು ಮನೆ ಹತ್ತಿರದ ಅಂಚೆ ಕಚೇರಿಗೆ ಕರೆ ಮಾಡಿದರೆ ಸಾಕು, 15 ನಿಮಿಷದಲ್ಲಿ ಹಣ ಸಿಗುತ್ತೆ. ಹೇಗೆ ಅಂತೀರಾ?
ಎಇಪಿಎಸ್ನಿಂದ ಸೇವೆ ಹೇಗೆ?
ಆಧಾರ್ ಎನೇಬಲ್ಡ್ ಪೇಮೆಂಟ್ ಸಿಸ್ಟಮ್ ಎಇಪಿಎಸ್ನ ವಿಸ್ತೃತ ರೂಪ. ಇದು ಹೊಟೇಲ್, ಮಾಲ್ಗಳಲ್ಲಿ ಬಳಸುವ ಪಿಒಎಸ್ (ಪಾಯಿಂಟ್ ಆಫ್ ಸೇಲ್) ರೀತಿಯ ಸಾಧನ. ಹಣ ಬೇಕಾದಾಗ ನೀವು ಮೊದಲು ಆಧಾರ್ ಸಂಖ್ಯೆ ಹೇಳಬೇಕು.
ಅನಂತರ ಬ್ಯಾಂಕ್ ಹೆಸರು, ಕಣ್ಣಿನ ಪ್ರತಿಫಲನ ಅಥವಾ ಬೆರಳಚ್ಚು ನೀಡಬೇಕು. ಬ್ಯಾಂಕ್ನಲ್ಲಿರುವ ಹೆಸರು ಅಥವಾ ಐಐಎನ್ ಸಂಖ್ಯೆ ಬೇಕಾಗುತ್ತದೆ. ಇದು ಖಾತ್ರಿಯಾದಾಗ ಹಣವನ್ನು ಅಂಚೆ ಸಿಬಂದಿ ನೀಡುತ್ತಾರೆ.
ತುರ್ತಾಗಿ ಹಣ ಬೇಕಾ?
ನೀವು ದೂರದ ಹಳ್ಳಿಯಲ್ಲಿದ್ದೀರಿ. ಹಣ ಬೇಕಾಗಿದೆ. ತತ್ಕ್ಷಣ ಸ್ಥಳೀಯ ಅಂಚೆ ಕಚೇರಿಗೆ ಕರೆ ಮಾಡಿ. ಅವರು ಹಣ ಮತ್ತು ಎಇಪಿಎಸ್ ಸಾಧನದೊಂದಿಗೆ ನಿಮ್ಮ ಮನೆ ಬಾಗಿಲಿಗೆ 10-15 ನಿಮಿಷಗಳಲ್ಲಿ ಬರುತ್ತಾರೆ.
ಖಾತೆ ಇರಬೇಕೆಂದಿಲ್ಲ
ಎಇಪಿಎಸ್ನಲ್ಲಿ ಹಣ ಪಡೆಯಲು ಅಂಚೆ ಕಚೇರಿಯಲ್ಲಿ ಖಾತೆ ಇರಬೇಕೆಂದೇನು ಇಲ್ಲ. ನಿಮಗೆ ಬ್ಯಾಂಕ್ ಖಾತೆಯಿರಬೇಕು, ಅದಕ್ಕೆ ಆಧಾರ್ ಸಂಖ್ಯೆ ಲಿಂಕ್ ಆಗಿರಬೇಕು ಅಷ್ಟೇ.
– ದೇಶಾದ್ಯಂತ ಇರುವ ಅಂಚೆ ಕಚೇರಿಗಳ ಸಂಖ್ಯೆ: 1.36 ಲಕ್ಷ.
– ದೇಶಾದ್ಯಂತ ಇರುವ ಎಇಪಿಎಸ್ ಸಾಧನಗಳ ಸಂಖ್ಯೆ: 1.86 ಲಕ್ಷ
– 2 ಲಕ್ಷ. ಹಣವನ್ನು ಮನೆ ಬಾಗಿಲಿಗೆ ತಲುಪಿಸಲಾಗಿದೆ.