India’s Rapid Development, ಖ್ಯಾತಿಗೆ ಸ್ಥಿರಸರ್ಕಾರ ಕಾರಣ: ಪ್ರಧಾನಿ ಮೋದಿ
Team Udayavani, Oct 30, 2023, 8:55 PM IST
ನವದೆಹಲಿ: “ಭಾರತ ಕ್ಷಿಪ್ರವಾಗಿ ಅಭಿವೃದ್ಧಿ ಹೊಂದುತ್ತಿದ್ದು, ವಿಶ್ವಾದ್ಯಂತ ಮೆಚ್ಚುಗೆಗೂ ಪಾತ್ರವಾಗುತ್ತಿದೆ. ಇದಕ್ಕೆಲ್ಲಾ ಸ್ಥಿರ ಸರ್ಕಾರವನ್ನು ನೀಡಿದ ರಾಷ್ಟ್ರದ ಸಾರ್ವಜನಿಕರ ಶಕ್ತಿಯೇ ಕಾರಣ’. ಹೀಗೆಂದು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಹೇಳಿದ್ದಾರೆ.
ಗುಜರಾತ್ನ ಮೆಹ್ಸಾನಾದ ಖೇರಾಲು ಎಂಬಲ್ಲಿ 5,950 ಕೋಟಿ ರೂ.ಮೌಲ್ಯದ ಯೋಜನೆಗಳಿಗೆ ಉದ್ಘಾಟನೆ, ಶಿಲಾನ್ಯಾಸ ನೆರವೇರಿಸಿದ ಮೋದಿ, ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಸುದೀರ್ಘ ಕಾಲದಿಂದಲೂ ಇರುವ ಸ್ಥಿರ ಸರ್ಕಾರ, ರಾಜ್ಯಕ್ಕೆ ಲಾಭದಾಯಕವಾಗುವಂತೆ ಒಂದಕ್ಕೊಂದು ಪೂರಕವಾಗಿ ನಿರ್ಧಾರ ತೆಗೆದುಕೊಳ್ಳುವಲ್ಲಿ ಹೇಗೆ ಸಹಾಯಕವಾಗಿದೆ ಎಂಬುದನ್ನು ಗುಜರಾತ್ ಕಂಡುಕೊಂಡಿದೆ. ಇದಕ್ಕೆ ಸ್ಥಿರ ಸರ್ಕಾರವನ್ನು ನೀಡಿದ ರಾಷ್ಟ್ರದ ಸಾರ್ವಜನಿಕರ ಶಕ್ತಿಯೇ ಕಾರಣ ಎಂದಿದ್ದಾರೆ.
ಅಲ್ಲದೇ, ಕಳೆದ ಕೆಲವು ವರ್ಷಗಳಿಂದ ತೆಗೆದುಕೊಂಡ ಗಟ್ಟಿ ನಿರ್ಣಯಗಳು, ದೊಡ್ಡ-ದೊಡ್ಡ ಯೋಜನೆಗಳೇ ಗುಜರಾತ್ನ ಕ್ಷಿಪ್ರ ಬೆಳವಣಿಗೆಗೆ ಕಾರಣ. ನನ್ನನ್ನು ಓರ್ವ ಪ್ರಧಾನಿ ಎನ್ನುವುದಕ್ಕಿಂತ ನಿಮ್ಮ ನರೇಂದ್ರಭಾಯಿ ಎನ್ನುವಂತೆ ನೀವು ಕಂಡಿದ್ದೀರಿ, ಅಂತೆಯೇ ನಿಮ್ಮ ನರೇಂದ್ರಭಾಯಿ ಒಮ್ಮೆ ಮಾಡಿದ ಪ್ರತಿಜ್ಞೆಯನ್ನು ಪೂರೈಸಿಯೇ ಪೂರೈಸುತ್ತಾರೆ ಎಂದೂ ಮೋದಿ ಜನತೆಗೆ ಭರವಸೆಯನ್ನೂ ನೀಡಿದ್ದಾರೆ.