Jammu-Kashmir; ಕಣಿವೆಯಲ್ಲಿ ಅಧ್ಯಾಪಕ ಅಮಾನತಾಗಿದ್ದೇಕೆ? ಸುಪ್ರೀಂ ಕೋರ್ಟ್
Team Udayavani, Aug 28, 2023, 8:13 PM IST
ನವದೆಹಲಿ: ಜಮ್ಮುಕಾಶ್ಮೀರದ 370ನೇ ವಿಧಿ ರದ್ದನ್ನು ವಿರೋಧಿಸಿ ಸುಪ್ರೀಂ ಕೋರ್ಟ್ನಲ್ಲಿ ವಾದ ಮಂಡಿಸಿದ್ದ ಕಣಿವೆಯ ಅಧ್ಯಾಪಕನನ್ನು ಕೆಲಸದಿಂದ ಅಮಾನತು ಮಾಡಿರುವ ಬಗ್ಗೆ ಸುಪ್ರೀಂ ಕೋರ್ಟ್ ಗಮನ ಹರಿಸಿದೆ.
ಅವರ ಅಮಾನತಿಗೆ ಕಾರಣವೇನು? ಇದು ಪ್ರತೀಕಾರದ ಕ್ರಮವೇ? ಎಂದು ಕೇಂದ್ರದ ಅಟಾರ್ನಿ ಜನರಲ್ ಆರ್.ವೆಂಕಟರಮಣಿ ಹಾಗೂ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಪ್ರಶ್ನಿಸಿದೆ. ಅಧ್ಯಾಪಕ ಜಹೂರ್ ಅಹ್ಮದ್ ಭಟ್ರನ್ನು ವಜಾಗೊಳಿಸಿರುವ ಸಂಗತಿಯನ್ನು ಹಿರಿಯ ವಕೀಲರಾದ ಕಪಿಲ್ ಸಿಬಲ್, ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ಪಂಚಸದಸ್ಯ ನ್ಯಾಯಪೀಠದ ಗಮನಕ್ಕೆ ಸೋಮವಾರ ತಂದಿದ್ದಾರೆ.
ಈ ಹಿನ್ನೆಲೆಯಲ್ಲಿ ನ್ಯಾಯಪೀಠವು “ಯಾವುದೋ ವಿಚಾರದ ಕುರಿತು ವ್ಯಕ್ತಿಯೊಬ್ಬರು ಸುಪ್ರೀಂ ಕೋರ್ಟ್ನ ಮುಂದೆ ಬಂದು ವಾದ ಮಂಡಿಸಿದ ಮಾತ್ರಕ್ಕೆ ಅವರನ್ನು ವಜಾಗೊಳಿಸುವಂಥ ಕೆಲಸ ಆಗಕೂಡದು, ಅದು ಸರಿಯಲ್ಲ, ಈ ಬಗ್ಗೆ ವಿಚಾರಿಸಿ ನ್ಯಾಯಾಲಯಕ್ಕೆ ತಿಳಿಸಿ’ ಎಂದು ಸೂಚನೆ ನೀಡಿದೆ.