ಅನುಮತಿ ಇಲ್ಲದೇ ಚಾರ್ಜ್ ಶೀಟ್ ಸಲ್ಲಿಸಿದ್ದೇಕೆ ? ಕೋರ್ಟ್ ತರಾಟೆ
Team Udayavani, Jan 19, 2019, 7:08 AM IST
ಹೊಸದಿಲ್ಲಿ : ಜೆಎನ್ಯು ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷ ಕನ್ಹಯ್ಯ ಕುಮಾರ್ ಮತ್ತು ಇತರರ 2016ರ ದೇಶದ್ರೋಹದ ಕೇಸಿಗೆ ಸಂಬಂಧಪಟ್ಟು ಅಗತ್ಯ ಅನುಮತಿಯನ್ನು ಪಡೆಯದೇ ಚಾರ್ಜ್ ಶೀಟ್ ಸಲ್ಲಿಸಿದ ದಿಲ್ಲಿ ಪೊಲೀಸರನ್ನು ಇಲ್ಲಿನ ನ್ಯಾಯಾಲಯ ತೀವ್ರವಾಗಿ ಪ್ರಶ್ನಿಸಿ ತರಾಟೆಗೆ ತೆಗೆದುಕೊಂಡಿದೆ.
ಇನ್ನು ಹತ್ತು ದಿನಗಳ ಒಳಗೆ ನಾವು ಅಗತ್ಯ ಅನುಮತಿಯನ್ನು ಪಡೆಯುತ್ತೇವೆ ಎಂದು ಪೊಲೀಸರು ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟರಾದ ದೀಪಕ್ ಶೇರಾವತ್ ಅವರಿಗೆ ಹೇಳಿದರೂ ಅದು ಪೀಠಕ್ಕೆ ಸಮರ್ಪಕ ಉತ್ತರ ಎನಿಸಲಿಲ್ಲ.
ಅಂತೆಯೇ ನ್ಯಾಯಾಧೀಶ ಶೇರಾವತ್ ಅವರು “ಅಗತ್ಯ ಅನುಮತಿ ಪಡೆಯದೇ ನೀವು ಚಾರ್ಜ್ ಶೀಟ್ ಸಲ್ಲಿಸಿದ್ದಾದರೂ ಏಕೆ ? ನಿಮ್ಮಲ್ಲಿ ಕಾನೂನು ಸಲಹೆ ಇಲಾಖೆ ಇಲ್ಲವೇ ?’ ಎಂದು ಖಡಕ್ ಆಗಿ ಪ್ರಶ್ನಿಸಿದರು.
ದಿಲ್ಲಿ ಪೊಲೀಸರು ಕಳೆದ ಜನವರಿ 14ರಂದು ಕನ್ಹಯ್ಯ ಕುಮಾರ್ ಮತ್ತು ಇತರರ ವಿರುದ್ಧ ಚಾರ್ಜ್ ಶೀಟ್ ದಾಖಲಿಸಿದ್ದರು.