ತಿಂಗಳ ಬಳಿಕ ಕಂಬಳ ವಿರುದ್ಧ ವಿಚಾರಣೆ
Team Udayavani, Jan 16, 2018, 6:15 AM IST
ಹೊಸದಿಲ್ಲಿ: ಕರ್ನಾಟಕದ ಕರಾವಳಿ ಭಾಗದಲ್ಲಿ ನಡೆಯುವ ಕಂಬಳ ಮತ್ತು ಉತ್ತರ ಕರ್ನಾಟಕ ಭಾಗದಲ್ಲಿ ನಡೆಯುವ ಎತ್ತಿನ ಗಾಡಿ ಓಡಿಸುವ ಸ್ಪರ್ಧೆಗಳು ಮುಂದಿನ ಒಂದು ತಿಂಗಳ ವರೆಗೆ ನಿರಾತಂಕವಾಗಿ ನಡೆಯಲಿವೆ.
ಎತ್ತಿನ ಗಾಡಿ ಓಡಿಸುವ ಮತ್ತು ಕಂಬಳ ನಡೆಸಲು ಅನುವು ಮಾಡಿಕೊಟ್ಟ ಕರ್ನಾಟಕ ಸರಕಾರದ ಕ್ರಮ ಖಂಡಿಸಿ ಫೆಡರೇಷನ್ ಆಫ್ ಇಂಡಿಯನ್ ಎನಿಮಲ್ ಪ್ರೊಟೆಕ್ಷನ್ ಆರ್ಗನೈಸೇಷನ್ಸ್ (ಎಫ್ಐಎಪಿಒ) ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಪೀಠ “ಒಂದು ತಿಂಗಳ ಬಳಿಕ ವಿಚಾರಣೆಗೆ ಲಿಸ್ಟ್ ಮಾಡಿ’ ಎಂದು ಸೂಚಿಸಿತು.
ಕಳೆದ ವರ್ಷದ ಜನವರಿ 28ರಂದು ಪ್ರಾಣಿಗಳ ವಿರುದ್ಧ ಕ್ರೌರ್ಯ ತಡೆ ಕಾಯ್ದೆಗೆ ಕರ್ನಾಟಕ ಸರಕಾರ ತಿದ್ದುಪಡಿ ತಂದು ಜಾರಿ ಮಾಡಿತ್ತು. ಅದರಲ್ಲಿ ಈ ಎರಡು ಕ್ರೀಡೆಗಳನ್ನು ಮುಂದುವರಿಸಲು ಅನುವು ಮಾಡಿಕೊಡಲಾಗಿತ್ತು. ಅದನ್ನು ಖಂಡಿಸಿ ಎಫ್ಐಎಪಿಒ ಸುಪ್ರೀಂಕೋರ್ಟ್ಗೆ ಹೊಸತಾಗಿ ಮೇಲ್ಮನವಿ ಸಲ್ಲಿಸಿತ್ತು. ಎರಡೂ ಮಾದರಿಯ ಜಾನಪದ ಕ್ರೀಡೆಗಳಲ್ಲಿ ಪ್ರಾಣಿಗಳಿಗೆ ನೋವು ಉಂಟು ಮಾಡಿ, ಕ್ರೌರ್ಯ ಮೆರೆಯಲಾಗುತ್ತದೆ ಎಂದು ಸಂಘಟನೆ ಪ್ರತಿಪಾದಿಸಿದೆ.
ಪೇಟಾ ಸಂಘಟನೆ ಕೂಡ ಕರಾವಳಿ ಕರ್ನಾಟಕದ ಭಾಗದಲ್ಲಿ ನಡೆಯುತ್ತಿರುವ ಕಂಬಳ ಮತ್ತು ತಮಿಳುನಾಡಿನಲ್ಲಿ ನಡೆಯುವ ಸಾಂಪ್ರ ದಾ ಯಿಕ ಕ್ರೀಡೆ ಜಲ್ಲಿಕಟ್ಟು ಅನ್ನು ವಿರೋಧಿಸಿ ಕಾನೂನು ಹೋರಾಟ ನಡೆಸುತ್ತಿದೆ.