Karnataka ಅಪರಾಧಿಗಳಿಗೆ ಸುರಕ್ಷಿತ ಸ್ವರ್ಗವಾಗುತ್ತಿದೆ: ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್
ಅಪರಾಧಗಳ ಕೇಂದ್ರ ಆಗುತ್ತಿರುವುದನ್ನು ನೋಡುವುದು ದುಃಖಕರವಾಗಿದೆ
Team Udayavani, Jul 12, 2023, 4:25 PM IST
ಹೊಸದಿಲ್ಲಿ: ಬೆಳಗಾವಿ ಜಿಲ್ಲೆಯಲ್ಲಿ ಜೈನ ಮುನಿ ಹತ್ಯೆಗೆ ಸಂಬಂಧಿಸಿದಂತೆ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಬುಧವಾರ ವಾಗ್ದಾಳಿ ನಡೆಸಿದ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಅವರು ಕೋಮುವಾದಿಗಳು ಮತ್ತು ಕ್ರಿಮಿನಲ್ಗಳಿಗೆ ಕರ್ನಾಟಕ ಸುರಕ್ಷಿತ ಸ್ವರ್ಗ ಆಗುತ್ತಿದೆ ಎಂದು ಕಿಡಿ ಕಾರಿದ್ದಾರೆ.
ಬಿಜೆಪಿಯ ಪುನರಾವರ್ತಿತ ಪ್ರತಿಭಟನೆಯ ನಂತರವೇ ರಾಜ್ಯ ಪೊಲೀಸರು ಈ ವಿಷಯದಲ್ಲಿ ಕ್ರಮಕೈಗೊಂಡಿದ್ದಾರೆ ಎಂದು ಕರ್ನಾಟಕದ ರಾಜ್ಯಸಭಾ ಸಂಸದರಾಗಿರುವ ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ. ರಾಹುಲ್ ಗಾಂಧಿಯವರ ಕಾಂಗ್ರೆಸ್ ಸರಕಾರದ ಅಡಿಯಲ್ಲಿ ಕರ್ನಾಟಕವು ಕೆಲವೇ ತಿಂಗಳುಗಳಲ್ಲಿ ಕೋಮುವಾದಿಗಳು ಮತ್ತು ಅಪರಾಧಿಗಳಿಗೆ ಸುರಕ್ಷಿತ ಸ್ವರ್ಗವಾಗಿದೆ. ಜೈನ ಮುನಿಯ ಬರ್ಬರ ಹತ್ಯೆ ಆಘಾತಕಾರಿಯಾಗಿದೆ’ ಎಂದು ಹೇಳಿದ್ದಾರೆ.
ಇತ್ತೀಚಿನ ಹಲವಾರು ಅಪರಾಧ ಘಟನೆಗಳನ್ನು ಉದಾಹರಿಸಿದ ಚಂದ್ರಶೇಖರ್, ಇದು ಪಟ್ಟಭದ್ರ ಹಿತಾಸಕ್ತಿಗಳ ಕೃತ್ಯವಾಗಿದೆ. ನಿರ್ದಿಷ್ಟ ಧರ್ಮ ಅಥವಾ ನಂಬಿಕೆಯೊಂದಿಗೆ ಸಂಬಂಧ ಹೊಂದಿರುವ ಜನರು ಗುರಿಯಾಗುವವರೆಗೆ ಕರ್ನಾಟಕ ಸುರಕ್ಷಿತ ಸ್ವರ್ಗ ಎಂದು ಅವರು ಭಾವಿಸುತ್ತಿರಬೇಕು.ರಾಜ್ಯ ಇಂತಹ ಕ್ರೂರ ಮತ್ತು ಹಿಂಸಾತ್ಮಕ ಅಪರಾಧಗಳ ಕೇಂದ್ರ ಆಗುತ್ತಿರುವುದನ್ನು ನೋಡುವುದು ದುಃಖಕರವಾಗಿದೆ ಎಂದರು.