ಪಾಕ್ ಕದನ ವಿರಾಮ ಕೋರಿಕೆಯಲ್ಲಿ ವಿಶ್ವಾಸಾರ್ಹತೆ ಇಲ್ಲ: ಬಿಎಸ್ಎಫ್
Team Udayavani, Jun 13, 2018, 3:12 PM IST
ಹೊಸದಿಲ್ಲಿ : ಪಾಕಿಸ್ಥಾನದ ಕದನ ವಿರಾಮ ಕೋರಿಕೆಯಲ್ಲಿ ಯಾವದೇ ವಿಶ್ವಾಸಾರ್ಹತೆ ಉಳಿದಿಲ್ಲ ಎಂದು ಬಿಎಸ್ಎಫ್ ಹೇಳಿದೆ.
ಈಚಿನ ತಿಂಗಳಲ್ಲಿ ಪಾಕ್ ಪಡೆ ಎರಡು ರೀತಿಯಲ್ಲಿ ವರ್ತಿಸುತ್ತಿವೆ. ಮೊದಲನೇಯದಾಗಿ ಅದು ಕದನ ವಿರಾಮ ಉಲ್ಲಂಘನೆ ಮಾಡಿ ಭಾರತೀಯ ಪಡೆಗಳಿಗೆ ಹಾನಿ ಉಂಟುಮಾಡುತ್ತಿದೆ. ಎರಡನೇಯದಾಗಿ ಭಾರತದ ತೀಕ್ಷ್ಣ ಪ್ರತ್ಯುತ್ತರಗಳಿಗೆ ತತ್ತರಗೊಂಡು ಕದನ ವಿರಾಮ ಕೋರಿಕೆಯನ್ನು ಮಂಡಿಸುತ್ತಿದೆ. ಇದು ನಿರಂತರ ಆವರ್ತನ ರೀತಿಯಲ್ಲಿ ನಡೆಯುತ್ತಿದೆ. ಹಾಗಾಗಿ ಬಿಎಸ್ಎಫ್ ಈಗ ಸಹನೆ ಕಳೆದುಕೊಳ್ಳುವಂತಾಗಿದೆ. ಪಾಕಿಸ್ಥಾನದ ಕದನ ವಿರಾಮ ಕೋರಿಕೆಯಲ್ಲಿ ಯಾವುದೇ ವಿಶ್ವಾರ್ಸಾಹತೆ ಈಗ ಉಳಿದಿಲ್ಲ ಎಂದು ಭಾರತೀಯ ಗಡಿ ರಕ್ಷಣಾ ಪಡೆ ಹೇಳಿದೆ.
ನಿನ್ನೆ ಮಂಗಳವಾರ ಪಾಕ್ ಪಡೆಗಳು ಕದನ ವಿರಾಮ ಉಲ್ಲಂಘನೆಗೈದು ಜಮ್ಮು ಕಾಶ್ಮೀರದ ಸಾಂಬಾ ಜಿಲ್ಲೆಯಲ್ಲಿ ನಡೆಸಿರುವ ಗುಂಡಿನ ದಾಳಿಗೆ ನಾಲ್ಕು ಬಿಎಸ್ಎಫ್ ಯೋಧರು ಹುತಾತ್ಮರಾಗಿದ್ದಾರೆ.
ಈ ವರ್ಷದಲ್ಲಿ ಅನೇಕ ಬಾರಿ ಪಾಕ್ ಪಡೆಗಳು ಕದನ ವಿರಾಮ ಉಲ್ಲಂಘನೆ ಮಾಡಿವೆ. ಭಾರತದ ತೀಕ್ಷ್ಣ ಪ್ರತಿದಾಳಿಗೆ ಪಾಕ್ ಪಡೆಗಳು ತತ್ತರಗೊಂಡು ಅನಂತರ 2003ರ ಕದನ ವಿರಾಮ ಒಪ್ಪದಂಕ್ಕೆ ತಾನು ಬದ್ಧತೆ ತೋರುವುದಾಗಿ ಅದು ಹೇಳುತ್ತದೆ.
“ಕದನ ವಿರಾಮ ನಿರ್ಧಾರವನ್ನು ಉಭಯ ಪಕ್ಷಗಳೂ ಗೌರವಿಸಬೇಕು; ನಾವು ಯಾವತ್ತೂ ಕದನ ವಿರಾಮದ ಪಾವಿತ್ರ್ಯವನ್ನು ಕಾಯ್ದುಕೊಂಡು ಬಂದಿದ್ದೇವೆ; ಆದರೆ ಪಾಕಿಸ್ಥಾನ ಪದೇ ಪದೇ ತನ್ನ ಹಳೇ ಚಾಳಿಯನ್ನು ಮುಂದುವರಿಸುತ್ತಿದೆ’ ಎಂದು ಕಮಲ್ನಾಥ್ ಚೌಬೇ (ಎಡಿಜಿ, ಬಿಎಸ್ಎಫ್, ಜಮ್ಮು ಫ್ರಾಂಟಿಯರ್) ಹೇಳಿದರು.
ಎಲ್ಓಸಿಯಲ್ಲಿ ಭಾರತೀಯ ಪಡೆಗಳಿಗೆ ಮೂರು ಜವಾಬ್ದಾರಿಗಳಿವೆ : 1. ಗಡಿ ಕಣ್ಗಾವಲು, 2. ಗಡಿ ವಾಸಿ ಪೌರರ ರಕ್ಷಣೆ, 3. ಪಾಕ್ ಪಡೆಗಳ ದಾಳಿಗೆ ಪ್ರತ್ಯುತ್ತರ ನೀಡುವುದು. ಪಾಕಿಸ್ಥಾನ ಗಡಿಯಲ್ಲಿನ ತನ್ನ ಕಾನೂನು ಬಾಹಿರ ವರ್ತನೆಯನ್ನು ಒಪ್ಪಿಕೊಳ್ಳುತ್ತಿಲ್ಲ. ಪಾಕಿಸ್ಥಾನ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಇಂದು ಬುಧವಾರ ಅದು ಭಾರತದ ಪ್ರಭಾರ ಉಪ ಹೈಕಮಿಷನರ್ ಅವರನ್ನು ಕರೆಸಿಕೊಂಡು ಭಾರತವೇ ಕದನ ವಿರಾಮ ಉಲ್ಲಂಘನೆ ಮಾಡುತ್ತಿದೆ ಎಂದು ದೂರಿದೆ. ಪಾಕಿಸ್ಥಾನದ ಇಂತಹ ನಿರಾಧಾರ ಆರೋಪಗಳ ಹೊರತಾಗಿಯೂ ಭಾರತೀಯ ಪಡೆಗಳು ಪಾಕ್ ದಾಳಿಗೆ ಪ್ರತ್ಯುತ್ತರ ನೀಡುವುದನ್ನು ಮಾತ್ರವೇ ಮುಂದುವರಿಸುತ್ತಿದೆ ಎಂದು ಚೌಬೇ ಹೇಳಿದರು.