ಉಗ್ರರ ದಾಳಿ ಸಂಚು ವಿಫಲ: ಐವರು ಉಗ್ರರನ್ನು ಬಂಧಿಸಿದ ದೆಹಲಿ ಪೊಲೀಸ್, ಶಸ್ತ್ರಾಸ್ತ್ರ ವಶ
ಮೂವರು ಉಗ್ರರು ಜಮ್ಮು-ಕಾಶ್ಮೀರ ಮೂಲದವರಾಗಿದ್ದು, ಇಬ್ಬರು ಪಂಜಾಬ್ ರಾಜ್ಯಕ್ಕೆ ಸೇರಿದವರು
Team Udayavani, Dec 7, 2020, 11:00 AM IST
ನವದೆಹಲಿ:ಮಹತ್ವದ ಬೆಳವಣಿಗೆಯೊಂದರಲ್ಲಿ ದೆಹಲಿ ಪೊಲೀಸರು ಸೋಮವಾರ(ಡಿಸೆಂಬರ್ 7, 2020) ಐವರು ಭಯೋತ್ಪಾದಕರನ್ನು ಬಂಧಿಸುವ ಮೂಲಕ ಭಾರೀ ದಾಳಿಯ ಸಂಚನ್ನು ವಿಫಲಗೊಳಿಸಿರುವುದಾಗಿ ವರದಿ ತಿಳಿಸಿದೆ.
ದೆಹಲಿಯ ಶಕರ್ ಪುರ್ ಪ್ರದೇಶದಲ್ಲಿ ಗುಂಡಿನ ಚಕಮಕಿಯ ಬಳಿಕ ಐವರು ವ್ಯಕ್ತಿಗಳನ್ನು ಬಂಧಿಸಲಾಗಿದೆ ಎಂದು ಸ್ಪೆಷಲ್ ಸೆಲ್ ಡಿಸಿಪಿ ಪ್ರಮೋದ್ ಕುಶ್ವಾಹಾ ತಿಳಿಸಿದ್ದಾರೆ. ಈ ಉಗ್ರರು ಯಾವ ಸಂಘಟನೆಗೆ ಸೇರಿದವರು ಎಂಬುದು ಇನ್ನಷ್ಟೇ ತಿಳಿದು ಬರಬೇಕಾಗಿದೆ.
ಇವರು ಮೂವರು ಉಗ್ರರು ಜಮ್ಮು-ಕಾಶ್ಮೀರ ಮೂಲದವರಾಗಿದ್ದು, ಇಬ್ಬರು ಪಂಜಾಬ್ ರಾಜ್ಯಕ್ಕೆ ಸೇರಿದವರು ಎಂದು ವರದಿ ವಿವರಿಸಿದೆ. ಸ್ಪೆಷಲ್ ಸೆಲ್ ಅಧಿಕಾರಿಗಳು ಉಗ್ರರನ್ನು ಬಂಧಿಸಲು ತೆರಳಿದ್ದ ವೇಳೆ ಗುಂಡಿನ ದಾಳಿ ನಡೆದಿತ್ತು. ನಂತರ ಐವರು ಶಂಕಿತ ಉಗ್ರರನ್ನು ಬಂಧಿಸಿ, ಅವರ ಬಳಿ ಇದ್ದ ಶಸ್ತ್ರಾಸ್ತ್ರ ಮತ್ತು ಇತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ:ಪೊಲೀಸರ ಮೇಲೆ ಹಲ್ಲೆ ನಡೆಸಿದ ಕಾಂಗ್ರೆಸ್ ಎಂಎಲ್ ಸಿ ಪುತ್ರ ಮತ್ತು ಸ್ನೇಹಿತರು
ರಾಜಧಾನಿ ದೆಹಲಿಯ ಖಾನ್ ಮಾರ್ಕೆಟ್ ಪ್ರದೇಶದಲ್ಲಿ 20 ದಿನಗಳ ಹಿಂದೆ ಸ್ಫೋಟದ ಸಂಚು ರೂಪಿಸಿದ್ದ ಜೈಶ್ ಎ ಮೊಹಮ್ಮದ್ ಸಂಘಟನೆಯ ಇಬ್ಬರು ಉಗ್ರರನ್ನು ದೆಹಲಿ ದೆಹಲಿ ಪೊಲೀಸರು ಸೆರೆಹಿಡಿದ ನಂತರ ಈ ಬೆಳವಣಿಗೆ ನಡೆದಿದೆ ಎಂದು ವರದಿ ವಿವರಿಸಿದೆ.