ದಲಿತನಿಗೆ ಮಲಬಳಿದ ಪ್ರಕರಣ: ಮಲ್ಲಿಕಾರ್ಜುನ ಖರ್ಗೆ ಆಕ್ರೋಶ
Team Udayavani, Jul 25, 2023, 5:00 AM IST
ಭೋಪಾಲ್: ಬಿಜೆಪಿ ಆಡಳಿತಾರೂಢ ಮಧ್ಯಪ್ರದೇಶದಲ್ಲಿ ದಲಿತರ ಮೇಲಿನ ದೌರ್ಜನ್ಯಗಳು ವರದಿಯಾಗುತ್ತಲೇ ಇರುವುದರ ಬಗ್ಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ, ಪ್ರಧಾನಿ ನರೇಂದ್ರ ಮೋದಿ ಅವರ ಸಬ್-ಕಾ ಸಾಥ್ ಸಬ್-ಕಾ ವಿಕಾಸ್ ಘೋಷಣೆ ಬರೀ ಪ್ರಚಾರವಾಗುಳಿದಿದೆ ಎಂದು ಟೀಕಿಸಿದ್ದಾರೆ.
ಇತ್ತೀಚೆಗಷ್ಟೇ ದಲಿತ ಸಮುದಾಯದ ವ್ಯಕ್ತಿಯ ಮೇಲೆ ಮೂತ್ರ ವಿಸರ್ಜನೆ, ಥಳಿತ ಸೇರಿದಂತೆ ಅನೇಕ ಪ್ರಕರಣಗಳು ವರದಿಯಾಗಿದ್ದವು. ಆ ಬೆನ್ನಲ್ಲೇ, ಛತ್ತರ್ಪುರದಲ್ಲಿ ದಲಿತ ವ್ಯಕ್ತಿಯೊಬ್ಬರು ಅಕಸ್ಮಾತ್ ಆಗಿ ಗ್ರೀಸ್ ಮೆತ್ತಿದ ಕೈನಲ್ಲಿ ಪತ್ರವೊಂದನ್ನು ಮುಟ್ಟಿದ್ದಕ್ಕಾಗಿ, ಒಬಿಸಿ ಸಮುದಾಯದ ವ್ಯಕ್ತಿಯು, ದಲಿತ ವ್ಯಕ್ತಿಗೆ ಮನುಷ್ಯನ ಮಲವನ್ನು ಮೆತ್ತಿರುವ ಘಟನೆ ವರದಿಯಾಗಿದೆ.
ಈ ಹಿನ್ನೆಲೆಯಲ್ಲಿ ಖರ್ಗೆ ಟ್ವೀಟ್ ಮಾಡಿದ್ದಾರೆ. ” 2021ರ ಎನ್ಸಿಆರ್ಬಿ ವರದಿಗಳ ಪ್ರಕಾರ ದಲಿತರ ವಿರುದ್ಧದ ದೌರ್ಜನ್ಯಗಳು ಮಧ್ಯಪ್ರದೇಶದಲ್ಲಿ ಹೆಚ್ಚಾಗಿವೆ. ದಿನವೊಂದಕ್ಕೆ 7ಕ್ಕೂ ಅಧಿಕ ಅಪರಾಧಗಳು ವರದಿಯಾಗುತ್ತಿದೆ. ನಮ್ಮ ದಲಿತರು, ಬುಡಕಟ್ಟು ಜನರು ಹಾಗೂ ಹಿಂದುಳಿದವರು ಮಧ್ಯಪ್ರದೇಶದಲ್ಲಿ ದಿನವೂ ಅವಮಾನ ಅನುಭವಿಸುತ್ತಿದ್ದಾರೆ. ಬಿಜೆಪಿಯ ಧ್ಯೇಯವಾಕ್ಯ ಬರೀ ಜಾಹಿರಾತಿಗೆ ಸೀಮಿತವಾಗಿದೆ’ ಎಂದಿದ್ದಾರೆ.