ಶಬರಿಮಲೆಯಲ್ಲಿ ಭಕ್ತೆಯ ಮೇಲೆ ಹಲ್ಲೆ : ಮುಖ್ಯ ಆರೋಪಿ ಅರೆಸ್ಟ್
Team Udayavani, Nov 7, 2018, 6:59 PM IST
ತಿರುವನಂತಪುರ : ಶಬರಿಮಲೆ ದೇವಸ್ಥಾನವನ್ನು ಸಂದರ್ಶಿಸಲಿದ್ದ ಮಹಿಳಾ ಭಕ್ತರೋರ್ವರ ಮೇಲೆ ಹಲ್ಲೆ ನಡೆಸಲಾಗಿದೆ. ಈ ಹಲ್ಲೆ ಘಟನೆಯ ಮುಖ್ಯ ಆರೋಪಿಯಾಗಿ 29ರ ಹರೆಯದ ವ್ಯಕ್ತಿಯೋರ್ವನನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ವ್ಯಕ್ತಿ ಸೂರಜ್ ಎಂಬಾತ ಪತ್ತನಂತಿಟ್ಟ ಜಿಲ್ಲೆಯ ಎಳಂತೂರು ನಿವಾಸಿ ಎಂದು ಗೊತ್ತಾಗಿದೆ. ಎರಡು ದಿನಗಳ ಕಾಲದ ಚಿತಿರಾ ಅತ್ತ ತಿರುನಾಳ್ ಕಾರ್ಯಕ್ರಮಕ್ಕಾಗಿ ತೆರೆದಿರುವ ಶಬರಿಮಲೆ ದೇವಳಕ್ಕೆ ಭೇಟಿ ನೀಡಲಿದ್ದ ಈ ಮಹಿಳಾ ಭಕ್ತೆಯು 52ರ ಹರೆಯದವಳಾಗಿದ್ದು ಆಕೆಯ ಮುಟ್ಟು ನಿಂತಿಲ್ಲವೆಂದು ಶಂಕಿಸಿ ಬಂಧಿತ ಆರೋಪಿಯು ಆಕೆಯ ಮೇಲೆ ಹಲ್ಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಲಲಿತಾ ರವಿ ಎಂಬ ಹೆಸರಿನ ಮಹಿಳಾ ಭಕ್ತಳನ್ನು ದೇವಸ್ಥಾನ ಪ್ರವೇಶಿಸದಂತೆ ನೂರಕ್ಕೂ ಅಧಿಕ ಉದ್ರಿಕ್ತ ಭಕ್ತರು ತಡೆಯಲು ಮುಂದಾಗಿದ್ದರು. ಬಂಧಿತ ಆರೋಪಿಯು ಆಕೆಯ ಮೇಲೆ ಹಲ್ಲೆ ಗೈದಿದ್ದ ಎಂದು ಪೊಲೀಸರು ಹೇಳಿದ್ದಾರೆ.
ಮಹಿಳೆಯ ಮೇಲೆ ಹಲ್ಲೆಗೈದಿರುವರೆನ್ನಲಾದ ಇತರ ಆರೋಪಿಗಳನ್ನು ಬಂಧಿಸುವ ದಿಶೆಯಲ್ಲಿ ತನಿಖೆ ನಡೆಯುತ್ತಿದೆ ಎಂದು ಪತ್ತನಂತಿಟ್ಟ ಎಸ್ಪಿ ನಾರಾಯಣನ್ ತಿಳಿಸಿದ್ದಾರೆ. ಪೊಲೀಸರು ಸುಮಾರು 100 ಶಂಕಿತ, ಆದರೆ ಗುರುತಿಸಬಹುದಾದ, ಹಲ್ಲೆಕೋರರ ವಿರುದ್ಧ ಕೇಸು ದಾಖಲಿಸಿಕೊಂಡಿದ್ದಾರೆ ಎಂದವರು ಹೇಳಿದ್ದಾರೆ.