ಎನ್ನೆಸ್ಒ ಜತೆ ವಹಿವಾಟಿಲ್ಲ :ಪೆಗಾಸಸ್ ಕುರಿತು ರಕ್ಷಣ ಇಲಾಖೆ ಸ್ಪಷ್ಟನೆ
Team Udayavani, Aug 10, 2021, 7:20 AM IST
ಹೊಸದಿಲ್ಲಿ: ಪೆಗಾಸಸ್ ಬೇಹುಗಾರಿಕೆ ಪ್ರಕರಣವು ಇಡೀ ಸಂಸತ್ ಅಧಿವೇಶನವನ್ನೇ ಕೊಚ್ಚಿಹೋಗುವಂತೆ ಮಾಡುತ್ತಿರುವ ಮಧ್ಯೆಯೇ ಸೋಮವಾರ ರಕ್ಷಣ ಸಚಿವಾಲಯವು ರಾಜ್ಯಸಭೆಯಲ್ಲಿ ಈ ಕುರಿತು ಸ್ಪಷ್ಟನೆಯೊಂದನ್ನು ನೀಡಿದೆ.
ಬೇಹು ತಂತ್ರಾಂಶ ಅಭಿವೃದ್ಧಿಪಡಿಸಿರುವ ಇಸ್ರೇಲ್ನ ಎನ್ಎಸ್ಒ ಗ್ರೂಪ್ ಸಂಸ್ಥೆಯೊಂದಿಗೆ ಸಚಿವಾಲಯವು ಯಾವುದೇ ರೀತಿಯ ವ್ಯವಹಾರ ಮಾಡಿಲ್ಲ ಎಂದು ರಕ್ಷಣ ಇಲಾಖೆ ಸ್ಪಷ್ಟಪಡಿಸಿದೆ. ರಾಜ್ಯಸಭೆಯಲ್ಲಿ ಸಿಪಿಎಂ ಸದಸ್ಯ ವಿ.ಶಿವದಾಸನ್ ಅವರ ಕೇಳಿದ ಪ್ರಶ್ನೆಗೆ ಉತ್ತರವಾಗಿ ರಕ್ಷಣ ಇಲಾಖೆ ಸಹಾಯಕ ಸಚಿವ ಅಜಯ್ ಭಟ್, “ಎನ್ಎಸ್ಒ ಗ್ರೂಪ್ನೊಂದಿಗೆ ರಕ್ಷಣ ಸಚಿವಾಲಯ ಯಾವುದೇ ವಹಿವಾಟು ನಡೆಸಿಲ್ಲ’ ಎಂದಿದ್ದಾರೆ.
ಲೋಕಸಭೆಯಲ್ಲಿ 3 ಬಿಲ್ ಪಾಸ್: ಪೆಗಾಸಸ್ ಕುರಿತು ಚರ್ಚೆಗೆ ಆಗ್ರಹಿಸಿ ಪ್ರತಿಪಕ್ಷಗಳು ಗದ್ದಲ ಮುಂದುವರಿಸಿರುವಂತೆಯೇ ಸೋಮವಾರ 3 ವಿಧೇಯಕಗಳು ಲೋಕಸಭೆಯಲ್ಲಿ ಅಂಗೀಕಾರಗೊಂಡಿವೆ. ಅವೆಂದರೆ, ಸೀಮಿತ ಬಾಧ್ಯತೆ ಪಾಲುದಾರಿಕೆ(ತಿದ್ದುಪಡಿ) ವಿಧೇಯಕ, ವಿಮೆ ಮತ್ತು ಸಾಲ ಖಾತ್ರಿ ನಿಗಮ ತಿದ್ದುಪಡಿ ವಿಧೇಯಕ ಮತ್ತು ಸಾಂವಿಧಾನಿಕ (ಪರಿಶಿಷ್ಟ ವರ್ಗಗಳು) ಆದೇಶ ತಿದ್ದುಪಡಿ ವಿಧೇಯಕ. ಕೇವಲ 10 ನಿಮಿಷಗಳಲ್ಲಿ “ದೋಸೆ ಮಾಡಿದಂತೆ’ 3 ಬಿಲ್ ಪಾಸ್ ಮಾಡಲಾಗಿದೆ ಎಂದು ಆರ್ಎಸ್ಪಿ ಸದಸ್ಯ ಎನ್.ಕೆ. ಪ್ರೇಮಚಂದ್ರನ್ ಹೇಳಿದ್ದಾರೆ. ಇನ್ನು, ಸರಕಾರವು ಪ್ರಜಾಸತ್ತೆಯ ಹತ್ಯೆ ಮಾಡುತ್ತಿದೆ ಎಂದು ಕಾಂಗ್ರೆಸ್ ಕಿಡಿಕಾರಿದೆ.
ಹಲವು ವಿಧೇಯಕ ಅಂಗೀಕಾರ: ಚಲನಚಿತ್ರ ಪ್ರಮಾಣೀಕರಣ ಮೇಲ್ಮನವಿ ನ್ಯಾಯಾಧಿಕರಣ ಸೇರಿದಂತೆ 9 ಮೇಲ್ಮನವಿ ನ್ಯಾಯಾಧಿಕರಣಗಳನ್ನು ರದ್ದು ಮಾಡುವಂಥ “ನ್ಯಾಯಾಧಿಕರಣಗಳ ಸುಧಾರಣ ವಿಧೇಯಕ, 2021′ ಸೋಮವಾರ ರಾಜ್ಯಸಭೆಯಲ್ಲಿ ಅಂಗೀಕಾರಗೊಂಡಿದೆ.