ಗುಜರಾತಲ್ಲಿ ತಾರೇ ಜಮೀನ್ ಪರ್!
Team Udayavani, Nov 25, 2017, 9:53 AM IST
ಅಹಮದಾಬಾದ್: ಮುಂದಿನ ತಿಂಗಳ 9ರಂದು ನಡೆಯಲಿರುವ ಗುಜರಾತ್ ಚುನಾವಣೆಯ ಮೊದಲ ಹಂತದ ಮತದಾನದ ಹೊತ್ತಿಗೆ ಬಿಜೆಪಿ ವತಿಯಿಂದ ಪ್ರಧಾನಿ ಮೋದಿ ನೇತೃತ್ವದಲ್ಲಿ ಕನಿಷ್ಠ 30 ರ್ಯಾಲಿಗಳನ್ನು ನಡೆಸಲು ಉದ್ದೇಶಿಸಲಾಗಿದ್ದು, ಇದರಲ್ಲಿ ಮೋದಿ ಸೇರಿದಂತೆ ಕೇಂದ್ರ ಸಂಪುಟದ 26 ಸಚಿವರು, ಬಿಜೆಪಿಯ 6 ಮುಖ್ಯಮಂತ್ರಿಗಳು, ಡಜನ್ಗಟ್ಟಲೆ ಬಿಜೆಪಿ ಸಂಸದರು ಪಾಲ್ಗೊಳ್ಳಲಿರುವುದು ವಿಶೇಷ.
ವಿವಿಧ ರ್ಯಾಲಿಗಳಲ್ಲಿ ಭಾಗವಹಿಸಲಿರುವ ಬಿಜೆಪಿ ಸಿಎಂಗಳಲ್ಲಿ ಯೋಗಿ ಆದಿತ್ಯನಾಥ ಸ್ಟಾರ್ ಪ್ರಚಾರಕರಾಗಿ ಈಗಾಗಲೇ ಭಾರೀ ನಿರೀಕ್ಷೆ ಹುಟ್ಟಿಸಿದ್ದಾರೆ. ಇತರ ನಾಯಕರ ರ್ಯಾಲಿಗೆ ಸೇರುವ ಜನಕ್ಕಿಂತ ದುಪ್ಪಟ್ಟು ಜನರು ಯೋಗಿ ರ್ಯಾಲಿಗೆ ಸಾಕ್ಷಿಯಾಗುತ್ತಾರೆಂಬ ಭರವಸೆಯನ್ನು ಬಿಜೆಪಿ ಹೊಂದಿದೆ.
ಬಿಜೆಪಿ ಲೇವಡಿ
ಇಡೀ ಕೇಂದ್ರ ಸಂಪುಟವೇ ಬಿಜೆಪಿಯ ಚುನಾವಣಾ ಪ್ರಚಾರ ಸಮಿತಿಯಾಗಿ ಬದಲಾಗಿದೆ ಎಂದು ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್ ಮಾಡಿದ್ದ ಟೀಕೆಗೆ ಗುಜರಾತ್ ಬಿಜೆಪಿ, “ಕಾಂಗ್ರೆಸ್ನಲ್ಲಿಲ್ಲದ ತಾರಾಮಂಡಲ ಬಿಜೆಪಿಯಲ್ಲಿದೆ’ ಎಂದು ತಿರುಗೇಟು ನೀಡಿದೆ.
ಬಿಜೆಪಿ 5ನೇ ಪಟ್ಟಿ
ಕೇಂದ್ರ ಹಾಗೂ ಉತ್ತರ ಗುಜರಾತ್ನ 13 ವಿಧಾನಸಭಾ ಕ್ಷೇತ್ರಗಳಿಗೆ ಡಿ.14ರಂದು ನಡೆಯಲಿರುವ 2ನೇ ಹಂತದ ಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ. ಇದು ಬಿಜೆಪಿಯ ಐದನೇ ಪಟ್ಟಿ. ಅಚ್ಚರಿಯೆಂದರೆ, ರಾಜ್ಯಸಭೆ ಚುನಾವಣೆ ಸಮೀಪಿಸಿದಾಗ ಬಿಜೆಪಿಗೆ ಪಕ್ಷಾಂತರ ಗೊಂಡ ಕಾಂಗ್ರೆಸ್ ಶಾಸಕ ಪ್ರಹ್ಲಾದ್ ಪಟೇಲ್ಗೆ ಅವರು ಪ್ರತಿನಿಧಿಸುತ್ತಿದ್ದ ವಿಜಾಪುರ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಸಿಕ್ಕಿಲ್ಲ.
ರಾಹುಲ್ ಅಭಯ
ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, ಗುರುವಾರ ಪೋರ್ಬಂದರಿನ ಬೆಸ್ತ ಸಮುದಾಯವನ್ನು ಭೇಟಿ ಮಾಡಿ ಅವರ ಸಮಸ್ಯೆಗಳನ್ನು ಆಲಿಸಿದರು.