ಮುಸ್ಲಿಮರೂ ಗೋ ಸಂರಕ್ಷಣೆಗೆ ಪ್ರಾಣ ತ್ಯಾಗ ಮಾಡಿದ್ದಾರೆ: ಭಾಗವತ್
Team Udayavani, Sep 30, 2017, 12:42 PM IST
ನಾಗ್ಪುರ: ‘ಗೋ ಸಂರಕ್ಷಣೆಗಾಗಿ ಮುಸ್ಲಿಮರೂ ಪ್ರಾಣ ಕಳೆದುಕೊಂಡಿದ್ದು , ಗೋ ಸಂರಕ್ಷಣೆಗೆ ನಮ್ಮ ಸಂವಿಧಾನದಲ್ಲೂ ಅವಕಾಶ ಇದೆ’ ಎಂದು ಆರ್ಎಸ್ಸೆಸ್ ಮುಖಂಡ ಮೋಹನ್ ಭಾಗವತ್ ಹೇಳಿದ್ದಾರೆ.
ಶನಿವಾರ ವಿಜಯದಶಮಿಯ ಆರೆಸ್ಸೆಸ್ ಬೈಠಕ್ ನಲ್ಲಿ ಮಾತನಾಡಿದ ಭಾಗವತ್ ‘ನಮ್ಮ ದೇಶದಲ್ಲಿ ಗೋವುಗಳನ್ನು ಹಾಲಿಗಿಂತ ಹೆಚ್ಚಾಗಿ ಗೋಮೂತ್ರ ಮತ್ತು ಸೆಗಣಿಗಾಗಿ ಸಾಕಲಾಗುತ್ತಿದೆ . ರೈತರು ಗೋವು ಆಧಾರಿತ ಕೃಷಿ ಮಾಡುತ್ತಿದ್ದಾರೆ. ಗೋವು ಧರ್ಮದ ವಿಚಾರವಲ್ಲ. ಎಲ್ಲರೂ ಗೋ ರಕ್ಷಣೆಗೆ ಮುಂದಾಗಬೇಕು. ಗೋವಿನ ರಕ್ಷಣೆಗಾಗಿ ಹಿಂಸಾತ್ಮಕ ಮಾರ್ಗ ಅನುಸರಿಸಬಾರದು’ ಎಂದು ಕರೆ ನೀಡಿದರು.
‘ಅನೇಕ ಮುಸ್ಲಿಮರೂ ಗೋ ರಕ್ಷಣೆಗಾಗಿ ಕೆಲಸ ಮಾಡಿದ್ದಾರೆ. ಕೆಲವರು ಪ್ರಾಣವನ್ನೂ ಕಳೆದುಕೊಂಡಿದ್ದಾರೆ’ ಎಂದು ಭಾಗವತ್ ಹೇಳಿದರು .
‘ಹಲವು ವ್ಯಕ್ತಿಗಳು ಗೋ ಸಂರಕ್ಷರಿಂದ ಹತ್ಯೆಗೀಡಾಗಿದ್ದಾರೆ, ಇದೆ ವೇಳೆ ಗೋ ಕಳ್ಳ ಸಾಗಾಣಿಕೆದಾರರಿಂದ ಹಲವರ ಹತ್ಯೆಯಾಗಿದೆ. ಧರ್ಮವನ್ನು ಮೀರಿ ಗೋವನ್ನು ರಕ್ಷಿಸಬೇಕಾಗಿದೆ’ ಎಂದರು.
‘ರೊಹಿಂಗ್ಯಾ ಮುಸ್ಲಿಮರಿಗೆ ಆಶ್ರಯ ನೀಡುವ ವಿಚಾರದಲ್ಲಿ ರಾಷ್ಟ್ರದ ಭದ್ರತೆಯ ಬಗ್ಗೆ ಮೋದಿ ಸರ್ಕಾರ ಆಲೋಚಿಸಬೇಕು, ಈಗಾಗಲೇ ಬಾಂಗ್ಲಾ ವಲಸಿಗರಿಂದ ನಾವು ಸಮಸ್ಯೆ ಎದುರಿಸುತ್ತಿದ್ದೇವೆ’ ಎಂದರು.
‘ಕೇರಳ ಮತ್ತು ಪಶ್ಚಿಮ ಬಂಗಾಳ ಸರ್ಕಾರಗಳು ದೇಶ ದ್ರೋಹಿಗಳಿಗೆ ನೆರವು ನೀಡುತ್ತಿವೆ’ ಎಂದು ಕಿಡಿ ಕಾರಿದರು.
ಸಮಾರಂಭದಲ್ಲಿ ಮಾಜಿ ಉಪ ಪ್ರಧಾನಿ ಲಾಲ್ ಕೃಷ್ಣ ಅಡ್ವಾಣಿ, ಮಹಾರಾಷ್ಟ ಸಿಎಂ ದೇವೇಂದ್ರ ಫಡ್ನವೀಸ್ , ಕೇಂದ್ರ ಸಚಿವ ನಿತಿನ್ ಗಡ್ಗರಿ ಮೊದಲಾದವರು ಉಪಸ್ಥಿತರಿದ್ದರು.