ನಾಗಾಲ್ಯಾಂಡ್: ಕೇಂದ್ರದ ವಿಷಾದ ; ಸಂಸತ್ನಲ್ಲಿ ಹೇಳಿಕೆ ನೀಡಿದ ಸಚಿವ ಅಮಿತ್ ಶಾ
Team Udayavani, Dec 7, 2021, 6:00 AM IST
ಹೊಸದಿಲ್ಲಿ: ನಾಗಾಲ್ಯಾಂಡ್ನಲ್ಲಿ ಸೇನೆಯ ಅಚಾತುರ್ಯಕ್ಕೆ 14 ನಾಗರಿಕರು ಬಲಿಯಾದ ಘಟನೆ ಬಗ್ಗೆ ಸಂಸತ್ನಲ್ಲಿ ಸೋಮವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿಷಾದಿಸಿದ್ದಾರೆ.
ಲೋಕಸಭೆಯಲ್ಲಿ ಈ ವಿಚಾರದ ಕುರಿತು ಹೇಳಿಕೆ ನೀಡಿದ ಶಾ, “ತಪ್ಪಾಗಿ ನಡೆದ ಕೃತ್ಯದಿಂದಾಗಿ ಅಸುನೀಗಿದ ಕಾರ್ಮಿಕರ ಕುಟುಂಬಕ್ಕೆ ಸಾಂತ್ವನ ಹೇಳಬಯಸುತ್ತೇನೆ. ಈ ದುರದೃಷ್ಟಕರ ಘಟನೆಗೆ ಕೇಂದ್ರ ಸರಕಾರವು ಪ್ರಾಮಾಣಿಕವಾಗಿ ವಿಷಾದಿಸುತ್ತದೆ. ಉಗ್ರರ ಚಲನವಲನಗಳ ಬಗ್ಗೆ ಸುಳಿವು ಸಿಕ್ಕ ಹಿನ್ನೆಲೆಯಲ್ಲಿ ಕಮಾಂಡೋಗಳು ಸ್ಥಳಕ್ಕೆ ಧಾವಿಸಿದ್ದರು. ಕಾರ್ಮಿಕರಿದ್ದ ಪಿಕಪ್ ವಾಹನವನ್ನು ನಿಲ್ಲುವಂತೆ ಸೂಚಿಸಿದರೂ, ವಾಹನ ವೇಗವಾಗಿ ಮುಂದಕ್ಕೆ ಚಲಿಸಿತು. ಹೀಗಾಗಿ ಒಳಗೆ ಬಂಡುಕೋರರು ಇದ್ದಾರೆಂದು ಭಾವಿಸಿ ಯೋಧರು ಗುಂಡಿನ ದಾಳಿ ಮಾಡಿದರು’ ಎಂದು ವಿವರಿಸಿದರು.
ಬಳಿಕ, ಬಂಡುಕೋರರ ವಿರುದ್ಧ ಕ್ರಮ ಕೈಗೊಳ್ಳುವಾಗ ಇಂತಹ ಘಟನೆ ನಡೆಯದಂತೆ ಎಲ್ಲ ಏಜೆನ್ಸಿಗಳೂ ಎಚ್ಚರಿಕೆ ವಹಿಸಬೇಕು ಎಂದೂ ಸೂಚಿಸಿದ್ದು, ವಿಶೇಷ ತನಿಖಾ ತಂಡದ ತನಿಖೆಯು ಒಂದು ತಿಂಗಳೊಳಗೆ ಪೂರ್ಣಗೊ ಳ್ಳಲಿದೆ ಎಂದಿದ್ದಾರೆ.
ಇದನ್ನೂ ಓದಿ:ಪಕ್ಷದ ನೂತನ ಕಚೇರಿ ತೆರೆದ ಅಮರೀಂದರ್ ಸಿಂಗ್
ಎಫ್ಐಆರ್ ದಾಖಲು: ಪ್ರಕರಣ ಸಂಬಂಧ ಅರೆಸೇನಾಪಡೆಗಳ ಸಿಬಂದಿ ವಿರುದ್ಧ ನಾಗಾಲ್ಯಾಂಡ್ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಯಾವುದೇ ಪ್ರಚೋದನೆ ಯಿಲ್ಲದೇ ಗ್ರಾಮಸ್ಥರ ಮೇಲೆ ದಾಳಿ ನಡೆಸಲಾ ಗಿದೆ¬. ಸ್ಥಳೀಯ ಪೊಲೀಸರಿಗೂ ಮಾಹಿತಿ ನೀಡದೇ ಕಾರ್ಯಾಚರಣೆ ನಡೆಸ ಲಾಗಿದೆ ಎಂದು ಎಫ್ಐಆರ್ನಲ್ಲಿ ಹೇಳ ಲಾಗಿದೆ.
ಎಎಫ್ಎಸ್ಪಿಎ ರದ್ದು ಆಗ್ರಹ: ಘಟನೆ ಬೆನ್ನಲ್ಲೇ ಸಶಸ್ತ್ರ ಪಡೆಗಳ ವಿಶೇಷಾಧಿಕಾರ ಕಾಯ್ದೆಯನ್ನು ರದ್ದು ಮಾಡಬೇಕೆಂಬ ಕೂಗು ಬಲವಾಗತೊಡಗಿದೆ. ಬಂಡು ಕೋರರನ್ನು ನಿಯಂತ್ರಿಸಲು ಜಾರಿ ಮಾಡಲಾಗಿದ್ದ ಕಾಯ್ದೆ ಅಗತ್ಯ ಈಗಿಲ್ಲ ಎಂದು ಎಂದು ನಾಗಾಲ್ಯಾಂಡ್ ಸಿಎಂ ನೈಫಿಯು ರಿಯೋ ಹೇಳಿದ್ದಾರೆ. ಮೇಘಾಲಯ ಸಿಎಂ ಕಾನ್ರಾಡ್ ಸಂಗ್ಮಾ ಅವರೂ ಇಂಥ ಆಗ್ರಹ ಮಾಡಿದ್ದಾರೆ.