ಟಿಎಂಸಿಗೆ ಹೊಸ ಶಾಕ್!
Team Udayavani, May 28, 2019, 6:00 AM IST
ಚುನಾವಣೆಯಲ್ಲಿ ಸೋಲಿನ ರುಚಿ ಉಂಡ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿಗೆ ಆಘಾತದ ಮೇಲೆ ಆಘಾತ ಉಂಟಾಗುತ್ತಿದೆ. ತೃಣಮೂಲ ಕಾಂಗ್ರೆಸ್ನ ಹಲವು ನಾಯಕರು ಬಿಜೆಪಿ ಸೇರುವ ಸುಳಿವು ನೀಡಿದ್ದಾರೆ. “ನನ್ನನ್ನು ಅನುಸರಿಸಿ’ ಎಂದು ಬಿಜೆಪಿ ನಾಯಕ ಮುಕುಲ್ ರಾಯ್ ಕೇಳಿಕೊಂಡ ಬೆನ್ನಲ್ಲೇ ಟಿಎಂಸಿಯ ಶಾಸಕರು ಕೇಸರಿ ಪಕ್ಷದತ್ತ ಹೆಜ್ಜೆಯಿಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇತ್ತೀಚೆಗಷ್ಟೇ ಟಿಎಂಸಿಯಿಂದ ಅಮಾನತುಗೊಂಡ ಮುಕುಲ್ ರಾಯ್ ಪುತ್ರ ಶುಬ್ರಾಂಗ್ಯು ಮಂಗಳವಾರ ಬಿಜೆಪಿಗೆ ಸೇರ್ಪಡೆ ಯಾಗಲಿದ್ದಾರೆ. ಸೋಮವಾರ ಅವರು ದಿಲ್ಲಿಗೆ ತೆರಳಿದ್ದು, ಅವರೊಂದಿಗೆ ಇನ್ನೂ ಇಬ್ಬರು ಟಿಎಂಸಿ ಶಾಸಕರು ರಾಷ್ಟ್ರ ರಾಜಧಾನಿಯತ್ತ ಪ್ರಯಾಣ ಬೆಳೆಸಿರುವುದು ಕುತೂಹಲಕ್ಕೆ ಎಡೆ ಮಾಡಿದೆ.