ಈಶಾನ್ಯ ರಾಜ್ಯಗಳಲ್ಲಿ ಅಧಿಕಾರಕ್ಕೆ ಬಂದ್ರೆ ಗೋ ಹತ್ಯೆ ನಿಷೇಧ ಇಲ್ಲ;BJP
Team Udayavani, Mar 27, 2017, 6:40 PM IST
ನವದೆಹಲಿ: ಉತ್ತರಪ್ರದೇಶ ಚುನಾವಣೆಯಲ್ಲಿ ಗೋಹತ್ಯೆ, ಅಕ್ರಮ ಕಸಾಯಿಖಾನೆ ನಿಷೇಧ ಪ್ರಮುಖ ಘೋಣೆಯಾಗಿತ್ತು, ಆದರೆ ಮುಂದಿನ ವರ್ಷ ಈಶಾನ್ಯ ರಾಜ್ಯಗಳಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಗೋ ಹತ್ಯೆ ನಿಷೇಧಿಸದಿರಲು ಬಿಜೆಪಿ ಚಿಂತನೆ ನಡೆಸಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.
ಉತ್ತರಪ್ರದೇಶದಲ್ಲಿ ಅಕ್ರಮ ಕಸಾಯಿಖಾನೆ ಹಾಗೂ ಗೋ ಹತ್ಯೆ ನಿಷೇಧ ಮಾಡುವುದಾಗಿ ಬಿಜೆಪಿ ಪ್ರಣಾಳಿಕೆಯಲ್ಲಿ ತಿಳಿಸಿದಂತೆ ಕ್ರಮಕೈಗೊಳ್ಳಲು ಮುಂದಾಗಿದೆ, ಆದರೆ ನಾಗಲ್ಯಾಂಡ್ ಸೇರಿದಂತೆ ಈಶಾನ್ಯ ರಾಜ್ಯಗಳಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಗೋ ಹತ್ಯೆ ನಿಷೇಧ ಇಲ್ಲ. ಯಾಕೆಂದರೆ ಈಶಾನ್ಯ ರಾಜ್ಯಗಳಲ್ಲಿ ಗೋ ಹತ್ಯೆ ನಿಷೇಧಿಸಿದರೆ ಏನಾಗಲಿದೆ ಎಂಬುದು ನಮ್ಮ ಕೇಂದ್ರ ನಾಯಕರಿಗೆ ತಿಳಿದಿದೆ ಎಂದು ನಾಗಲ್ಯಾಂಡ್ ಬಿಜೆಪಿ ಮುಖ್ಯಸ್ಥ ವಿಸಾಸೋಲೈ ಲೋಂಗು ಹಿಂದೂಸ್ತಾನ್ ಟೈಮ್ಸ್ ಗೆ ತಿಳಿಸಿರುವುದಾಗಿ ವರದಿ ಮಾಡಿದೆ.
ಮತ್ತೊಂದೆಡೆ ಮೇಘಾಲಯ ಬಿಜೆಪಿ ಘಟಕದ ಪ್ರಧಾನ ಕಾರ್ಯದರ್ಶಿ ಡೇವಿಡ್ ಪತ್ರಿಕಾ ಪ್ರಕಟಣೆ ನೀಡಿ, ಪೂರ್ವಾಗ್ರಹ ಪೀಡಿತ ಗುಂಪು ಈ ರೀತಿ ಸುಳ್ಳು ಸುದ್ದಿ ಪ್ರಚಾರ ಮಾಡುತ್ತಿರುವುದಾಗಿ ಆರೋಪಿಸಿದ್ದಾರೆ.
ಆದರೆ ಮಿಜೋರಾಂ ಸೇರಿದಂತೆ ಈಶಾನ್ಯ ರಾಜ್ಯಗಳಲ್ಲಿ ಗೋ ಹತ್ಯೆ ನಿಷೇಧಿಸಲು ಸಾಧ್ಯವಿಲ್ಲ.
ಯಾಕೆಂದರೆ ಇಲ್ಲಿ ಬಹುಸಂಖ್ಯಾತರು ಕ್ರಿಶ್ಚಿಯನ್ ಎಂದು ಮಿಜೋರಾಂ ಬಿಜೆಪಿ ಅಧ್ಯಕ್ಷ ಜೆವಿ ಹುನಾ ಅಭಿಪ್ರಾಯವ್ಯಕ್ತಪಡಿಸಿರುವುದಾಗಿ ಹಿಂದೂಸ್ತಾನ್ ಟೈಮ್ಸ್ ವರದಿ ವಿವರಿಸಿದೆ. ಮೇಘಾಲಯ, ಮಿಜೋರಾಂ ಹಾಗೂ ನಾಗಲ್ಯಾಂಡ್ ಗಳಲ್ಲಿ ಬಹುಸಂಖ್ಯಾತರಾಗಿರುವ ಕ್ರಿಶ್ಚಿಯನ್ ರು ಅತೀ ಹೆಚ್ಚು ಸೇವಿಸುವುದು ಗೋ ಮಾಂಸವನ್ನು ಎಂದು ಹೇಳಿದೆ.
ಉತ್ತರಪ್ರದೇಶದಲ್ಲಿ ಚುನಾವಣಾ ಪ್ರಣಾಳಿಕೆಯಲ್ಲಿ ಅಕ್ರಮ ಕಸಾಯಿಖಾನೆ ನಿಷೇಧಿಸುವುದಾಗಿ ಘೋಷಿಸಿತ್ತು. ಆದರೆ ಮೇಘಾಲಯ, ಮಿಜೋರಾಂ, ನಾಗಲ್ಯಾಂಡ್ ಗಳಲ್ಲಿ ಬಿಜೆಪಿ ಗೋ ಹತ್ಯೆ ನಿಷೇಧದ ಬಗ್ಗೆ ಯಾವ ಕ್ರಮ ತೆಗೆದುಕೊಳ್ಳಲಿದೆ ಎಂಬುದು ಮುಂದಿನ ವರ್ಷ ನಡೆಯಲಿರುವ ಚುನಾವಣೆಯ ನಂತರ ಬಹಿರಂಗವಾಗಲಿದೆ ಎಂದು ವರದಿ ವಿಶ್ಲೇಷಿಸಿದೆ.