ಲಸಿಕೆ ಸಿಗುವವರೆಗೆ ನಿರ್ಲಕ್ಷ್ಯ ಸಲ್ಲದು; ದೇಶವಾಸಿಗಳಿಗೆ ಮೋದಿ ಕಿವಿಮಾತು
Team Udayavani, Sep 13, 2020, 6:15 AM IST
ಭೋಪಾಲ: ಕೋವಿಡ್ ವಿರುದ್ಧ ಲಸಿಕೆ ಸಿಗುವ ತನಕ ನಿರ್ಲಕ್ಷ್ಯ ಸಲ್ಲದು ಎಂದು ದೇಶವಾಸಿಗಳಿಗೆ ಪ್ರಧಾನಿ ಮೋದಿ ಕಿವಿಮಾತು ಹೇಳಿದ್ದಾರೆ. ಪ್ರಧಾನಮಂತ್ರಿ ಆವಾಸ್ ಯೋಜನೆ (ಪಿಎಂಎವೈ)ಯಡಿ ಮಧ್ಯಪ್ರದೇಶದಲ್ಲಿ ಬಡವರಿಗಾಗಿ ನಿರ್ಮಿಸಲಾಗಿರುವ 1.75 ಲಕ್ಷ ಮನೆಗಳನ್ನು ಫಲಾನುಭವಿಗಳಿಗೆ ಹಸ್ತಾಂತರ ಮಾಡುವ ವರ್ಚ್ಯುವಲ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೋವಿಡ್ ಮುನ್ನೆಚ್ಚರಿಕೆಗಳನ್ನು ಜನರು ನಿರ್ಲಕ್ಷಿಸಬಾರದು ಎಂದರು.
ಜನರ ಒಳಿತಿಗಾಗಿಯೇ ಕೋವಿಡ್ ಮಾರ್ಗಸೂಚಿಗಳನ್ನು ಮತ್ತು ಮುನ್ನೆಚ್ಚರಿಕೆ ಕ್ರಮಗಳನ್ನು ಜಾರಿಗೊಳಿಸಲಾಗಿದೆ. ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು, ಮಾಸ್ಕ್ ಧರಿಸುವುದರ ಸಹಿತ ಎಲ್ಲ ಮುನ್ನೆಚ್ಚರಿಕೆಗಳನ್ನೂ ಕಡ್ಡಾಯವಾಗಿ ಪಾಲಿಸಬೇಕು ಎಂದರು.
ಗೃಹ ನಿರ್ಮಾಣ ಅವಧಿ ಕಡಿಮೆ
ಪಿಎಂಎವೈ ಅಡಿಯಲ್ಲಿ ಮನೆಗಳನ್ನು ನಿರ್ಮಿಸುವ ಅವಧಿ ಲಾಕ್ಡೌನ್ನಿಂದಾಗಿ ಗಣನೀಯವಾಗಿ ಕಡಿಮೆಯಾಯಿತು ಎಂದು ಪ್ರಧಾನಿ ಮೋದಿ ಅಭಿಪ್ರಾಯಪಟ್ಟಿದ್ದಾರೆ. ಲಾಕ್ಡೌನ್ನಿಂದಾಗಿ ಅನೇಕ ಕೂಲಿಕಾರರು ತಮ್ಮ ಹಳ್ಳಿಗಳಿಗೆ ಹಿಂದಿರುಗಿದರು. ಅವರೂ ಗೃಹ ನಿರ್ಮಾಣಕ್ಕೆ ಕೈ ಜೋಡಿಸಿದರು. ಅದರಿಂದ ಈ ಮೊದಲು ಪಿಎಂಎವೈ ಅಡಿಯಲ್ಲಿ ಒಂದು ಮನೆ ನಿರ್ಮಿಸಲು ಬೇಕಾಗಿದ್ದ ಸುಮಾರು 125 ದಿನಗಳ ಅವಧಿ 45ರಿಂದ 60 ದಿನಗಳಿಗೆ ತಗ್ಗಿತು. ಹಾಗಾಗಿ ನಿರೀಕ್ಷೆಗೆ ಮುನ್ನ ಮನೆಗಳು ಬಡವರ ಕೈ ಸೇರಲು ಸಹಾಯವಾಯಿತು. ಇಷ್ಟು ಕಡಿಮೆ ಅವಧಿಯಲ್ಲಿ ಲಕ್ಷಕ್ಕೂ ಅಧಿಕ ಮನೆಗಳನ್ನು ನಿರ್ಮಿಸಿರುವುದು ಒಂದು ದಾಖಲೆಯೇ ಸರಿ ಎಂದರು.