ಉ.ಪ್ರ. ಮಾಜಿ ಸಿಎಂಗಳಿಗೆ ಅಧಿಕೃತ ಸರಕಾರಿ ಬಂಗ್ಲೆ ಇಲ್ಲ: ಸುಪ್ರೀಂ
Team Udayavani, May 7, 2018, 11:37 AM IST
ಲಕ್ನೋ : ಉತ್ತರ ಪ್ರದೇಶದಲ್ಲಿ ಯಾವುದೇ ಮಾಜಿ ಮುಖ್ಯಮಂತ್ರಿಗಳು ತಮ್ಮ ಅಧಿಕಾರಾವಧಿ ಮುಗಿಸಿ ಹುದ್ದೆ ತೊರೆದ ಬಳಿಕ ಸರಕಾರಿ ಬಂಗ್ಲೆ ಹೊಂದುವಂತಿಲ್ಲ ಎಂದು ಹೇಳಿರುವ ಸುಪ್ರೀಂ ಕೋರ್ಟ್, ಈ ನಿಟ್ಟಿನಲ್ಲಿ ಉ.ಪ್ರ. ಸರಕಾರದ ಈ ಹಿಂದಿನ ನಿರ್ಧಾರವನ್ನು ತೊಡೆದು ಹಾಕಿದೆ.
ಮಾಜಿ ಮುಖ್ಯಮಂತ್ರಿಗಳು ತಮ್ಮ ಅಧಿಕಾರಾವಾಧಿ ಮುಗಿಸಿ ಹುದ್ದೆ ತೊರೆದ ಬಳಿಕವೂ ಅವರಿಗೆ ಅಧಿಕೃತ ಸರಕಾರಿ ಬಂಗಲೆಗಳನ್ನು ಕೊಡಬೇಕೆಂಬ ಹಿಂದಿನ ಉ.ಪ್ರ. ಸರಕಾರದ ನಿರ್ಧಾರವನ್ನು ಪ್ರಶ್ನಿಸಿ ಲೋಕಪ್ರಹಾರಿ ಎನ್ಜಿಓ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಮೇಲೆ ಸುಪ್ರೀಂ ಕೋರ್ಟ್ ಈ ಮೇಲಿನ ತೀರ್ಪು ನೀಡಿದೆ.
ತಮ್ಮ ಅಧಿಕಾರಾವಾಧಿ ಮುಗಿದು ಹುದ್ದೆಯಿಂದ ಕೆಳಗಿಳಿದ ಬಳಿಕವೂ ಮಾಜಿ ಮುಖ್ಯಮಂತ್ರಿಗಳು ತಮ್ಮ ಅಧಿಕೃತ ಸರಕಾರಿ ಬಂಗಲೆಯಲ್ಲಿ ಮುಂದುವರಿಯುವುದಕ್ಕೆ ಅವಕಾಶ ಕಲ್ಪಿಸುವ ಹಿಂದಿನ ಉತ್ತರ ಪ್ರದೇಶ ವಿಧಾನಸಭೆಯ ತಿದ್ದುಪಡಿಯನ್ನು ಸುಪ್ರೀಂ ಕೋರ್ಟ್ ಹೊಡೆದು ಹಾಕಿತು.
ಪ್ರಕೃತ ಮಾಜಿ ಸಿಎಂಗಳಾದ ಸಮಾಜವಾದಿ ಪಕ್ಷದ ಅಖೀಲೇಶ್ ಯಾದವ್ ಮತ್ತು ಮುಲಾಯಂ ಸಿಂಗ್ ಯಾದವ್, ಬಹುಜನ ಸಮಾಜ ಪಕ್ಷದ ಮುಖ್ಯಸ್ಥೆ ಮಾಯಾವತಿ, ಬಿಜೆಪಿಯ ರಾಜನಾಥ್ ಸಿಂಗ್, ಕಲ್ಯಾಣ್ ಸಿಂಗ್ ಮತ್ತು ಕಾಂಗ್ರೆಸ್ ಪಕ್ಷದ ಎನ್ ಡಿ ತಿವಾರಿ ಅವರು ತಾವು ಅಧಿಕಾರದಲ್ಲಿ ಪಡೆದಿದ್ದ ಅಧಿಕೃತ ಸರಕಾರಿ ಬಂಗಲೆಗಳನ್ನು ಇಂದಿಗೂ ತಮ್ಮ ವಶದಲ್ಲಿ ಇಟ್ಟುಕೊಂಡಿದ್ದಾರೆ.