ಪೌರತ್ವ ತಿದ್ದುಪಡಿ ಮಸೂದೆ ವಿರೋಧಿಸಿ ಈಶಾನ್ಯ ಭಾರತ 11 ಗಂಟೆ ಬಂದ್
Team Udayavani, Dec 10, 2019, 8:59 AM IST
ಹೊಸದಿಲ್ಲಿ: ಭಾರಿ ವಿವಾದಕ್ಕೆ ಕಾರಣವಾಗಿರುವ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ಇಂದು ಈಶಾನ್ಯ ಭಾರತದ ರಾಜ್ಯಗಳಲ್ಲಿ ಬಂದ್ ಆಚರಿಸಲಾಗುತ್ತಿದೆ.
ಈಶಾನ್ಯ ಭಾರತದ ರಾಜ್ಯಗಳಾದ ಅಸ್ಸಾಂ, ಅರುಣಾಚಲ ಪ್ರದೇಶ್, ಮೇಘಾಲಯ, ಮಿಜೋರಾಂ ಮತ್ತು ತ್ರಿಪುರ ರಾಜ್ಯಗಳಲ್ಲಿ ಇಂದು ಹನ್ನೊಂದು ಗಂಟೆಗಳ ಬಂದ್ ಗೆ ಕರೆ ನೀಡಲಾಗಿದೆ.
ಈಶಾನ್ಯ ಭಾರತ ವಿದ್ಯಾರ್ಥಿ ಸಂಘಟನೆ ಈ ಬಂದ್ ಗೆ ಕರೆ ನೀಡಿದ್ದು, ಅನೇಕ ಇತರ ಸಂಘಟನೆಗಳು ಮತ್ತು ಸ್ಥಳೀಯ ರಾಜಕೀಯ ಪಕ್ಷಗಳು ಬೆಂಬಲ ನೀಡಿದೆ.
ಕಾಯ್ದೆ ತಿದ್ದುಪಡಿಯನ್ನು ವಿರೋಧಿಸಿ ಮಂಗಳವಾರ ಬೆಳಿಗ್ಗೆ ಐದು ಗಂಟೆಯಿಂದ ಸಂಜೆ ನಾಲ್ಕು ಗಂಟೆಯವರೆಗೆ ಬಂದ್ ನಡೆಯಲಿದೆ.
ನಾಗಾಲ್ಯಾಂಡ್ ನಲ್ಲಿ ಸದ್ಯ ಹಾರ್ನ್ ಬಿಲ್ ಉತ್ಸವ ನಡೆಯುತ್ತಿರುವ ಕಾರಣ ೀ ರಾಜ್ಯದಲ್ಲಿ ಬಂದ್ ನಡೆಯುತ್ತಿಲ್ಲ.
ಗೌಹಾಟಿ ಮತ್ತು ದಿಬ್ರುಗಢ್ ವಿಶ್ವವಿದ್ಯಾಲಯದ ಪರೀಕ್ಷೆಗಳನ್ನು ಬಂದ್ ಕಾರಣ ಮುಂದೂಡಲಾಗಿದೆ.
ನೆರೆ ದೇಶಗಳಿಂದ ಭಾರತಕ್ಕೆ ವಲಸೆ ಬಂದು ಇಲ್ಲಿ ನೆಲೆಸಿರುವ ಮುಸ್ಲಿಮೇತರರಿಗೆ ಭಾರತೀಯ ಪೌರತ್ವ ನೀಡುವ ತಿದ್ದುಪಡಿಯನ್ನು ಕೇಂದ್ರ ಸರಕಾರ ಲೋಕಸಭೆಯಲ್ಲಿ ಮಂಡಿಸಿದ್ದು, ತಡರಾತ್ರಿವರೆಗಿನ ಚರ್ಚೆಯ ನಂತರ ಅಂಗೀಕಾರವಾಗಿದೆ.