Oil: ತೈಲೋತ್ಪನ್ನ ದರ ಶೀಘ್ರ ಇಳಿಕೆ?
Team Udayavani, Aug 18, 2023, 12:50 AM IST
ಹೊಸದಿಲ್ಲಿ: ಹಣದುಬ್ಬರವನ್ನು ನಿಯಂತ್ರಿಸುವುದಕ್ಕಾಗಿ ಪ್ರಧಾನಿ ಮೋದಿ ನೇತೃತ್ವದ ಸರಕಾರ ಹಲವು ಪ್ರಯತ್ನಗಳಿಗೆ ಮುಂದಾಗಲಿದ್ದು, ಲೋಕಸಭಾ ಚುನಾ ವಣೆಗೆ ಮೊದಲು ಪೆಟ್ರೋಲ್, ಡೀಸೆಲ್ ಹಾಗೂ ಆಹಾರ ಪದಾರ್ಥಗಳ ಬೆಲೆ ಇಳಿಸಲು ಚಿಂತಿಸುತ್ತಿದೆ.
ತೈಲೋತ್ಪನ್ನಗಳ ಮೇಲಿನ ತೆರಿಗೆ ಇಳಿಸುವ ಮೂಲಕ ಸಾಮಗ್ರಿಗಳ ಬೆಲೆಯನ್ನು ತಗ್ಗಿಸಲು ಯೋಜಿಸಲಾಗುತ್ತಿದೆ ಎಂದು ಹಿರಿಯ ಅಧಿಕಾರಿಗಳನ್ನು ಉಲ್ಲೇಖೀಸಿ “ಬ್ಲೂಮ್ಬರ್ಗ್’ ವರದಿ ಮಾಡಿದೆ. ಜತೆಗೆ ವಿವಿಧ ಸಚಿವಾಲಯಗಳಿಂದ ಒಂದು ಲಕ್ಷ ಕೋಟಿ ರೂ. ಮೊತ್ತವನ್ನು ಸಂಗ್ರಹಿಸಿ ಹಣದುಬ್ಬರ ನಿಯಂತ್ರಣಕ್ಕೆ ಮುಂದಾಗುವ ಸಾಧ್ಯತೆಗಳಿವೆ. ಅಡುಗೆ ಎಣ್ಣೆ ಮತ್ತು ಗೋಧಿ ಆಮದು ಮೇಲಿನ ಸುಂಕ ತಗ್ಗಿಸಲು ಮುಂದಾಗಿದೆ. ಇದರ ಜತೆಗೆ ಕಾಳಸಂತೆಕೋರರ ವಿರುದ್ಧ ಕೂಡ ನಿರಂತರವಾಗಿ ಕ್ರಮ ಕೈಗೊಳ್ಳಲಾಗು ತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವರ್ಷಾಂತ್ಯದಲ್ಲಿ ರಾಜಸ್ಥಾನ, ಮಧ್ಯಪ್ರದೇಶ ಸಹಿತ 5 ರಾಜ್ಯಗಳ ವಿಧಾನ ಸಭೆ ಚುನಾವಣೆ, ಮುಂದಿನ ವರ್ಷ ಲೋಕಸಭೆಯ ಚುನಾವಣೆ ಹಿನ್ನೆಲೆಯಲ್ಲಿ ಬೆಲೆ ಏರಿಕೆ ನಿಯಂತ್ರಣ ಕೇಂದ್ರ ಸರಕಾರಕ್ಕೆ ಅನಿವಾರ್ಯವಾಗಿದೆ. ಕೆಲವು ದಿನಗಳ ಹಿಂದಷ್ಟೇ ಹಣದುಬ್ಬರ 15 ತಿಂಗಳ ಗರಿಷ್ಠಕ್ಕೆ ಏರಿಕೆಯಾಗಿತ್ತು.
ಆಹಾರ ವಸ್ತುಗಳ ದರಗಳು ಗಗನಕ್ಕೆ ಏರಿರುವುದರಿಂದ ವಿಪಕ್ಷಗಳು ಕೇಂದ್ರ ಸರಕಾರವನ್ನು ತರಾಟೆಗೆ ತೆಗೆದುಕೊಳ್ಳುತ್ತಿವೆ. ಈಚೆಗೆ ಆರ್ಬಿಐ ಹಣದುಬ್ಬರ ನಿಯಂತ್ರಣದ ಬಗ್ಗೆ ಸೂಚ್ಯವಾಗಿ ಹೇಳಿತ್ತು.