ಭಾರತದಲ್ಲಿ ತೃತೀಯ ರಂಗಕ್ಕೆ ಚುನಾವಣೆ ಗೆಲ್ಲಲು ಸಾಧ್ಯವಿಲ್ಲ: ಪ್ರಶಾಂತ್ ಕಿಶೋರ್
Team Udayavani, Apr 30, 2022, 3:17 PM IST
ಹೊಸದಿಲ್ಲಿ: ಯಾವುದೇ ತೃತೀಯ ಅಥವಾ ನಾಲ್ಕನೇ ರಂಗವು ದೇಶದಲ್ಲಿ ಚುನಾವಣೆ ಗೆಲ್ಲುತ್ತದೆ ಎಂದು ನಂಬುವುದಿಲ್ಲ. ಬಿಜೆಪಿಯನ್ನು ಸೋಲಿಸಲು ಯಾವುದೇ ಪಕ್ಷವು ಬಯಸಿದರೆ, ಅದು ಎರಡನೇ ರಂಗವಾಗಿಯೇ ಹೊರಹೊಮ್ಮಬೇಕು ಎಂದು ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ಹೇಳಿದ್ದಾರೆ.
2024ರ ಸಾರ್ವತ್ರಿಕ ಚುನಾವಣೆಗೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ಪಕ್ಷ ಟಿಎಂಸಿಗೆ ಮೂರನೇ ರಂಗವಾಗಿ ಹೊರಹೊಮ್ಮಲು ನೀವು ಸಹಾಯ ಮಾಡುತ್ತಿದ್ದೀರಾ ಎಂಬ ಪ್ರಶ್ನೆಗೆ ಸುದ್ದಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಪ್ರಶಾಂತ್ ಕಿಶೋರ್ ಈ ಹೇಳಿಕೆ ನೀಡಿದರು.
“ಈ ದೇಶದಲ್ಲಿ ಯಾವುದೇ ಮೂರನೇ ಅಥವಾ ನಾಲ್ಕನೇ ರಂಗವು ಚುನಾವಣೆಯಲ್ಲಿ ಗೆಲ್ಲುತ್ತದೆ ಎಂದು ನಾನು ಎಂದಿಗೂ ನಂಬಲಿಲ್ಲ. ನಾವು ಬಿಜೆಪಿಯನ್ನು ಮೊದಲ ರಂಗವೆಂದು ಪರಿಗಣಿಸಿದರೆ, ಅದನ್ನು ಸೋಲಿಸ ಬಯಸುವ ಪಕ್ಷ ಎರಡನೇ ರಂಗವಾಗಿರಬೇಕು” ಎಂದು ಪ್ರಶಾಂತ್ ಕಿಶೋರ್ ಹೇಳಿದರು.
ಇದನ್ನೂ ಓದಿ:ಗಲಭೆಕೋರರ ನೆರವಿಗೆ ನಿಲ್ಲುವುದು ಕಾಂಗ್ರೆಸ್ ನಿಲುವು: ಸಿಎಂ ಬೊಮ್ಮಾಯಿ
ನೀವು ಕಾಂಗ್ರೆಸ್ ಪಕ್ಷವನ್ನು ಎರಡನೇ ರಂಗ ಎಂದು ಪರಿಗಣಿಸುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಪ್ರಶಾಂತ್ ಕಿಶೋರ್, ಇಲ್ಲ. ಕಾಂಗ್ರೆಸ್ ದೇಶದ ಎರಡನೇ ರಾಜಕೀಯ ಪಕ್ಷ ಎಂದರು.