ರಾಜ್ಯಸಭೆ ಎಲೆಕ್ಷನ್ಗೆ ‘ನೋಟಾ’ ಬೇಡವೆಂದು ‘ಕೈ’ ಹಠ
Team Udayavani, Aug 2, 2017, 8:45 AM IST
ಹೊಸದಿಲ್ಲಿ: ಗುಜರಾತ್ನಲ್ಲಿ ಕಾಂಗ್ರೆಸ್ ನಾಯಕ, ಸೋನಿಯಾ ಅವರ ಆಪ್ತ ಅಹ್ಮದ್ ಪಟೇಲ್ರನ್ನು ರಾಜ್ಯಸಭೆಗೆ ಮರು ಆಯ್ಕೆ ಮಾಡುವ ವಿಚಾರದಲ್ಲಿ ರಾಜಕೀಯ ಪಕ್ಷಗಳ ನಡುವೆ ಭಾರೀ ‘ಹಣಾ’ಹಣಿ ನಡೆಯುತ್ತಿರುವ ನಡುವೆಯೇ ಈ ಬಾರಿಯ ರಾಜ್ಯಸಭೆ ಚುನಾವಣೆಗೆ ‘ನೋಟಾ'(ವಿದ್ಯುನ್ಮಾನ ಮತಯಂತ್ರದಲ್ಲಿ ‘ಮೇಲಿನ ಯಾರೂ ಅಲ್ಲ’ ಎಂಬ ಗುಂಡಿ) ಆಯ್ಕೆಗೆ ಅವಕಾಶ ನೀಡುವ ಮೂಲಕ ಚುನಾವಣಾ ಆಯೋಗ ಪ್ರತಿಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿದೆ.
ಗುಜರಾತ್ ರಾಜ್ಯಸಭೆ ಚುನಾವಣೆಯನ್ನು ಕಾಂಗ್ರೆಸ್ ಮತ್ತು ಬಿಜೆಪಿ ಪ್ರತಿಷ್ಠೆಯ ವಿಚಾರವಾಗಿ ಎತ್ತಿಕೊಂಡಿರುವಾಗಲೇ ಚುನಾವಣಾ ಆಯೋಗವು ನೋಟಾ ಆಯ್ಕೆಗೆ ಅವಕಾಶ ಕಲ್ಪಿಸಿದೆ. ಇದರಿಂದ ಕೆಂಡಾಮಂಡಲವಾಗಿರುವ ಕಾಂಗ್ರೆಸ್ ಮಂಗಳವಾರ ಆಯೋಗವನ್ನು ಭೇಟಿಯಾಗಿ ಆಕ್ಷೇಪವೆತ್ತಿದೆ. ಆ.8ರ ಚುನಾವಣೆಯಿಂದ ನೋಟಾ ಆಯ್ಕೆ ರದ್ದು ಮಾಡಬೇಕು. ಈ ಆಯ್ಕೆಗೆ ಅವಕಾಶ ನೀಡುವುದು ಸಂವಿಧಾನ ಮತ್ತು ಚುನಾವಣಾ ಕಾನೂನಿನ ಉಲ್ಲಂಘನೆಯಾಗುತ್ತದೆ ಎಂದು ಕಾಂಗ್ರೆಸ್ ನಾಯಕರಾದ ಆನಂದ್ ಶರ್ಮ ಮತ್ತು ಮನೀಶ್ ತಿವಾರಿ ಹೇಳಿದ್ದಾರೆ. ಆದರೆ, ಇದಕ್ಕೆ ಒಪ್ಪದ ಆಯೋಗ, ‘ಇದೇನೂ ಹೊಸ ನಿರ್ದೇಶನವಲ್ಲ. ಇದನ್ನು 2014ರಲ್ಲೇ ಜಾರಿಗೆ ತರಲಾಗಿದೆ’ ಎಂದು ಸಮರ್ಥಿಸಿಕೊಂಡಿದೆ.
ಇದಕ್ಕೂ ಮುನ್ನ, ರಾಜ್ಯಸಭೆಯ ಕಲಾಪದ ವೇಳೆಯೂ ವಿಪಕ್ಷಗಳು ಈ ಕುರಿತು ಆಕ್ರೋಶ ವ್ಯಕ್ತಪಡಿಸಿದವು. ಈ ಬಗ್ಗೆ ಪ್ರತಿಕ್ರಿಯಿಸಿರುವ ಅಹ್ಮದ್ ಪಟೇಲ್ ಅವರು, ‘ಮೊದಲು ರಾಜ್ಯಸಭೆ ಚುನಾವಣೆ ಮುಂದೂಡಲಾಯಿತು. ಅನಂತರ, ಅಧಿಸೂಚನೆ ಹೊರಡಿಸಿದ ಬಳಿಕ ನೋಟಾ ಆಯ್ಕೆಗೆ ಅನುಮತಿ ನೀಡಲಾಯಿತು. ಇದಕ್ಕೆ ಕಾರಣವೇನೆಂದು ಚುನಾವಣಾ ಆಯೋಗಕ್ಕೆ ಚೆನ್ನಾಗಿ ಗೊತ್ತು’ ಎಂದು ಟ್ವೀಟಿಸಿದ್ದಾರೆ.