ಜಮ್ಮುವಿನಲ್ಲಿ ಭಾರೀ ಬೆಂಕಿ: ವಲಸೆ ಕಾರ್ಮಿಕರ 200ಕ್ಕೂ ಅಧಿಕ ಗುಡಿಸಲು ಭಸ್ಮ
Team Udayavani, Jun 3, 2019, 3:23 PM IST
ಜಮ್ಮು : ಜಮ್ಮುವಿನ ತ್ರಿಕೂಟನಗರದಲ್ಲಿ ಭಾರೀ ಬೆಂಕಿ ಅವಘಡ ಸಂಭವಿಸಿ ಕಾರ್ಮಿಕ 200ಕ್ಕೂ ಹೆಚ್ಚು ಗುಡಿಸಲುಗಳು ಸುಟ್ಟು ಭಸ್ಮವಾದವು. ಆದರೆ ಇಷ್ಟೊಂದು ದೊಡ್ಡ ಬೆಂಕಿ ಅನಾಹುತದಲ್ಲಿ ಯಾವುದೇ ಜೀವ ಹಾನಿ ಸಂಭವಿಸಿಲ್ಲ ಎಂದು ವರದಿಗಳು ತಿಳಿಸಿವೆ.
ತ್ರಿಕೂಟನಗರ ರೈಲು ನಿಲ್ದಾಣ ಸಮೀಪದ ಮರಾಠಾ ಕ್ಲಸ್ಟರ್ ಸಮೀಪ ನಸುಕಿನ 1 ಗಂಟೆಯ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿತು. ಬಲವಾಗಿ ಬೀಸುತ್ತಿದ್ದ ಗಾಳಿಯಿಂದಾಗಿ ಬೆಂಕಿ ಕ್ಷಣಾರ್ಧದಲ್ಲಿ ವ್ಯಾಪಿಸಿಕೊಂಡು ಕಾರ್ಮಿಕ 200ಕ್ಕೂ ಅಧಿಕ ಗುಡಿಸಲುಗಳು ಸುಟ್ಟು ಭಸ್ಮವಾದವು. ಈ ಗುಡಿಸಲು ಬಿಹಾರ ಮತ್ತು ಉತ್ತರ ಪ್ರದೇಶದ ವಲಸೆ ಕಾರ್ಮಿಕರಿಗೆ ಸೇರಿದವುಗಳಾಗಿದ್ದು ಇಲ್ಲಿ ಕೆಲವು ರೊಹಿಂಗ್ಯಾಗಳು ಕೂಡ ವಾಸವಾಗಿದ್ದಾರೆ.
ಬೆಂಕಿ ಅನಾಹುತದಲ್ಲಿ ತನ್ನ ಗುಡಿಸಲು ಮತ್ತು ಅದರೊಳಗಿನ ಎಲ್ಲ ಸೊತ್ತುಗಳನ್ನು ಕಳೆದುಕೊಂಡಿರುವ ಪಶ್ಚಿಮ ಬಂಗಾಲದ ಸರೋಜಿನಿ ದೇವಿ ಹೇಳಿರುವ ಪ್ರಕಾರ ಬೆಂಕಿಯಲ್ಲಿ 400ರಿಂದ 500 ಗುಡಿಸಲು ಸುಟ್ಟು ಹೋಗಿವೆ.
ಅಗ್ನಿ ಶಾಮಕಗಳು ಮೂರು ತಾಸುಗಳಿಗೂ ಹೆಚ್ಚು ಕಾಲ ಶ್ರಮಿಸಿ ಬೆಂಕಿಯನ್ನು ನಂದಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.