ನಾಶಿಕ್: ಪದ್ಮಾವತ್ ವಿರೋಧಿ ಕರ್ಣಿ ಕಾರ್ಯಕರ್ತರ ಬಂಧನ
Team Udayavani, Jan 24, 2018, 4:46 PM IST
ನಾಶಿಕ್ : ನಾಳೆ ಗುರುವಾರ ಬಿಡುಗಡೆಯಾಗಲಿರುವ ಸಂಜಯ್ ಲೀಲಾ ಭನ್ಸಾಲಿ ನಿರ್ದೇಶನದ ವಿವಾದಿತ “ಪದ್ಮಾವತ್’ ಚಿತ್ರದ ವಿರುದ್ಧ ಪ್ರತಿಭಟನೆ ನಡಸುತ್ತಿದ್ದ ಸುಮಾರು 20 ಮಂದಿ ಕರ್ಣಿ ಸೇನಾಕಾರ್ಯಕರ್ತರನ್ನು ಪೊಲೀಸರು ಇಂದು ಬಂಧಿಸಿದರು.
ಪದ್ಮಾವತ್ ಚಿತ್ರ ಬಿಡುಗಡೆಗೊಂಡರೆ ತಾವು ಜಿಲ್ಲಾ ಕೆಂದ್ರದಿಂದ 10 ಕಿ.ಮೀ. ದೂರದಲ್ಲಿರುವ ಗಂಗಾಪುರ ಅಣೆಕಟ್ಟಿನಲ್ಲಿ ಜಲ ಸಮಾಧಿ ಕೈಗೊಳ್ಳುವುದಾಗಿ ಕರ್ಣಿ ಸೇನೆಯ ಓರ್ವ ನಾಯಕ ಬೆದರಿಕೆ ಹಾಕಿದ್ದಾರೆ.
ಪದ್ಮಾವತ್ ವಿರುದ್ಧದ ಹಿಂಸೆಗೆ ನಮ್ಮನ್ನು ದೂರಬೇಡಿ; ನಾವು ಪದ್ಮಾವತ್ ಪ್ರದರ್ಶಿಸುವ ಚಿತ್ರ ಮಂದಿರಗಳ ಎದುರು ಜನತಾ ಕರ್ಫ್ಯೂ ವಿಧಿಸುತ್ತೇವೆ ಎಂದು ಕರ್ಣಿ ಸೇನೆಯ ಮುಖ್ಯಸ್ಥ ಲೋಕೇಂದ್ರ ಸಿಂಗ್ ಕಲ್ವಿ ಈ ನಡುವೆ ಹೇಳಿದ್ದಾರೆ.
ಸಂಜಯ್ ಲೀಲಾ ಭನ್ಸಾಲಿ ನಿರ್ದೇಶನದ ವಿವಾದಿತ ಐತಿಹಾಸಿಕ ಕಥಾ ಚಿತ್ರ ಪದ್ಮಾವತ್ (ಈ ಹಿಂದಿನ ಹೆಸರು ಪದ್ಮಾವತಿ) ಚಿತ್ರದ ವಿರುದ್ಧದ ದೇಶಾದ್ಯಂತದ ಹಿಂಸಾತ್ಮಕ ಪ್ರತಿಭಟನೆಗೆ ನಮ್ಮ ಸಂಘಟನೆಯನ್ನು ಯಾರೂ ದೂರಬಾರದು; ರಾಣಿ ಪದ್ಮಿನಿಯ ಘನತೆ ಗೌರವಗಳನ್ನು ರಕ್ಷಿಸುವುದು ರಾಜಪೂತರ ಕರ್ತವ್ಯವಾಗಿರುವುದರಿಂದ ಇತಿಹಾಸ ತಿರುಚಲಾದ ಪದ್ಮಾವತ್ ಚಿತ್ರವನ್ನು ನಾವು ವಿರೋಧಿಸುತ್ತಿದ್ದೇವೆ ಎಂದು ಲೋಕೇಂದ್ರ ಸಿಂಗ್ ಕಲ್ವಿ ಹೇಳಿದ್ದರು.