Independence Day; ವಿಧ್ವಂಸಕ ಕೃತ್ಯ ಸಂಚು ವಿಫಲ; ದೇಶಾದ್ಯಂತ ಹೈ ಅಲರ್ಟ್
ಸ್ವಾತಂತ್ರ್ಯೋತ್ಸವ ಮುನ್ನಾ ದಿನವೇ ಹಲವೆಡೆ ಕಾರ್ಯಾಚರಣೆ
Team Udayavani, Aug 15, 2023, 12:45 AM IST
ಹೊಸದಿಲ್ಲಿ: ದೇಶವು 77ನೇ ಸ್ವಾತಂತ್ರ್ಯೋತ್ಸವ ಆಚರಿಸುತ್ತಿರುವಂತೆಯೇ ದೇಶದ ಹಲವೆಡೆ ವಿಧ್ವಂಸಕ ಕೃತ್ಯಗಳನ್ನು ನಡೆಸಬೇಕೆಂಬ ಉಗ್ರರ ಸಂಚನ್ನು ಪ್ರತ್ಯೇಕ ಘಟನೆಗಳಲ್ಲಿ ಭದ್ರತಾ ಪಡೆಗಳು ಹಾಗೂ ಪೊಲೀಸರು ವಿಫಲಗೊಳಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯಲ್ಲಿ ಸೋಮವಾರ ಸುಧಾರಿತ ಸ್ಫೋಟಕ(ಐಇಡಿ)ವೊಂದು ಪತ್ತೆಯಾಗಿದೆ. ಕನಿನ್ಪೋರಾ ಕಾಲೇಜಿನ ಸಮೀಪದಲ್ಲೇ ಚೀಲವೊಂದರಲ್ಲಿ ಇದನ್ನು ಇರಿಸಲಾಗಿತ್ತು. ಸೇನಾಪಡೆ ಗಸ್ತು ತಿರುಗುವ ವೇಳೆ ಇದು ಕಣ್ಣಿಗೆ ಬಿದ್ದಿದ್ದು, ಕೂಡಲೇ ಬಾಂಬ್ ನಿಷ್ಕ್ರಿಯ ತಂಡವನ್ನು ಕರೆಸಿ, ಐಇಡಿಯನ್ನು ನಿಷ್ಕ್ರಿಯಗೊಳಿಸಲಾಗಿದೆ.
ಇದೇ ವೇಳೆ ಪಂಜಾಬ್ನಲ್ಲಿ ಟಾರ್ಗೆಟೆಡ್ ಹತ್ಯೆಗೆ ಸಂಚು ರೂಪಿಸಿದ್ದ ಪಾಕಿಸ್ಥಾನ ಮೂಲದ ಹರ್ವಿಂದರ್ ರಿಂಡಾ ಮತ್ತು ಅಮೆರಿಕ ಮೂಲದ ಗೋಲ್ಡಿ ಬ್ರಾರ್ ತಂಡದ ಐವರು ಸದಸ್ಯರನ್ನು ಪಂಜಾಬ್ ಪೊಲೀಸರು ಸೋಮವಾರ ಬಂಧಿಸಿದ್ದಾರೆ. ಇವರ ಬಳಿಯಿದ್ದ ಎರಡು ವಿದೇಶಿ ನಿರ್ಮಿತ ಪಿಸ್ತೂಲುಗಳನ್ನು ವಶಕ್ಕೆ ಪಡೆಯಲಾಗಿದೆ. ಈ ಮೂಲಕ ಪಂಜಾಬ್ನಲ್ಲಿ ದಾಳಿ ನಡೆಸಲು ಉಗ್ರರು ರೂಪಿಸಿದ್ದ ಸಂಚನ್ನು ವಿಫಲಗೊಳಿಸಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ. ರವಿವಾರವಷ್ಟೇ ಇಲ್ಲಿನ ತರನ್ ತಾರನ್ನಲ್ಲಿ ಮೂವರು ಉಗ್ರರನ್ನು ಬಂಧಿಸಿದ್ದ ಪೊಲೀಸರು, ಅವರಿಂದ ಕೆಲವು ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದ್ದರು.
ನುಸುಳುಕೋರನ ಹತ್ಯೆ: ಈ ನಡುವೆ, ಪಂಜಾಬ್ನ ಪಠಾಣ್ಕೋಟ್ ಜಿಲ್ಲೆಯ ಅಂತಾರಾಷ್ಟ್ರೀಯ ಗಡಿಯಲ್ಲಿ ನುಸುಳುಕೋರನೊಬ್ಬನನ್ನು ಬಿಎಸ್ಎಫ್ ಯೋಧರು ಸೋಮವಾರ ಹೊಡೆದುರುಳಿಸಿದ್ದಾರೆ.
ಇದೇ ವೇಳೆ ಮುಂಬಯಿ ಪೊಲೀಸರ ಸೈಬರ್ ಘಟಕಕ್ಕೆ ಕರೆ ಮಾಡಿ ಸ್ವಾತಂತ್ರ್ಯ ದಿನದಂದು ದಾದರ್ನಲ್ಲಿ ಸರಣಿ ಸ್ಫೋಟಗಳನ್ನು ನಡೆಸುವುದಾಗಿ ಬೆದರಿಕೆ ಹಾಕಿದ್ದ 34 ವರ್ಷದ ವ್ಯಕ್ತಿಯನ್ನು ಪೊಲೀಸರು ಸೋಮವಾರ ಬಂಧಿಸಿದ್ದಾರೆ.
ಹದ್ದಿನ ಕಣ್ಣು: ರಾಷ್ಟ್ರ ರಾಜಧಾನಿ ದಿಲ್ಲಿ ಸೇರಿದಂತೆ ದೇಶದ ಬಹುತೇಕ ರಾಜ್ಯಗಳಲ್ಲಿ ಸ್ವಾತಂತ್ರ್ಯ ದಿನದ ನಿಮಿತ್ತ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಭದ್ರತಾ ಪಡೆಗಳು ಹದ್ದಿನ ಕಣ್ಣಿಟ್ಟಿವೆ. ಜಮ್ಮು ಮತ್ತು ಕಾಶ್ಮೀರದ ಗಡಿ ನಿಯಂತ್ರಣ ರೇಖೆಯುದ್ದಕ್ಕೂ ಬಿಎಸ್ಎಫ್ ಕಟ್ಟೆಚ್ಚರ ವಹಿಸಿದೆ. ಕಾಶ್ಮೀರದಲ್ಲಿ ಮೂರು ಹಂತದ ಭದ್ರತೆಯನ್ನು ಏರ್ಪಡಿಸಲಾಗಿದ್ದು, ಹೆಲಿಕಾಪ್ಟರ್ ಹಾಗೂ ಡ್ರೋನ್ ಮೂಲಕವೂ ಕಣ್ಗಾವಲು ಇಡಲಾಗಿದೆ.
ಪೊಲೀಸ್ ಪದಕ: ಸ್ವಾತಂತ್ರ್ಯ ದಿನದ ಮುನ್ನಾದಿನವಾದ ಸೋಮವಾರ ಕೇಂದ್ರ ಸರಕಾರವು ವಿವಿಧ ಕೇಂದ್ರ ಮತ್ತು ರಾಜ್ಯ ಪಡೆಗಳ 954 ಪೊಲೀಸ್ ಸಿಬಂದಿಗೆ ಸೇವಾ ಪದಕ ಗಳನ್ನು ಘೋಷಿಸಿದೆ. 230 ಮಂದಿಗೆ ಶೌರ್ಯ ಪದಕಗಳನ್ನು ಘೋಷಿಸಲಾಗಿದ್ದು, ಈ ಪೈಕಿ ಗರಿಷ್ಠ ಅಂದರೆ 125 ಪದಕಗಳು ನಕ್ಸಲ್ ಪೀಡಿತ ಸ್ಥಳಗಳಲ್ಲಿ ನಿಯೋ ಜನೆಗೊಂಡವರಿಗೆ ದೊರೆತಿದೆ.
ತ್ರಿವರ್ಣ ಧ್ವಜ ಹಾರಿಸಿದ ಉಗ್ರನ ಸೋದರ: ಶ್ರೀನಗರದ ಹಿಜ್ಬುಲ್ ಮುಜಾಹಿದೀನ್ ಉಗ್ರ ಸಂಘಟನೆಯ ಸಕ್ರಿಯ ಸದಸ್ಯನಾಗಿರುವ ಜಾವೇದ್ ಅಹ್ಮದ್ನ ಸಹೋದರ ರಯೀಸ್ ಅಹ್ಮದ್ ಸೋಪೋರ್ನಲ್ಲಿರುವ ತಮ್ಮ ಮನೆಯ ಮೇಲೆ ತ್ರಿವರ್ಣ ಧ್ವಜ ಹಾರಿಸಿದ್ದಾರೆ. “ಸ್ವಇಚ್ಛೆಯಿಂದ ನಾನು ಇದನ್ನು ಮಾಡಿದ್ದೇನೆ. ನನ್ನ ಮೇಲೆ ಯಾರೂ ಒತ್ತಡ ಹೇರಿಲ್ಲ. ಇದು ನಮಗೆ ಎಲ್ಲವನ್ನೂ ನೀಡಿರುವಂಥ ನನ್ನ ದೇಶದ ಧ್ವಜ. ನನ್ನ ಸೋದರ ತಪ್ಪು ಮಾಡಿದ್ದಾನೆ. ಅವನು ಈಗಲೂ ಜೀವಂತವಾಗಿದ್ದರೆ, ವಾಪಸ್ ಬಂದುಬಿಡು ಎಂದು ಕೇಳಿಕೊಳ್ಳುತ್ತೇನೆ’ ಎಂದಿದ್ದಾರೆ ರಯೀಸ್.
ತಿರಂಗಾ ರ್ಯಾಲಿಯಲ್ಲಿ ಪ್ರತ್ಯೇಕತಾವಾದಿ ನಾಯಕ!
ಅಚ್ಚರಿಯ ಬೆಳವಣಿಗೆಯೊಂದರಲ್ಲಿ, ಜಮ್ಮು ಮತ್ತು ಕಾಶ್ಮೀರದ ದಾಲ್ ಸರೋವರದ ಬಳಿ ಆರಂಭವಾದ ಹರ್ ಘರ್ ತಿರಂಗಾ ರ್ಯಾಲಿಯಲ್ಲಿ ಪ್ರತ್ಯೇಕತಾವಾದಿ ನಾಯಕ ಕೂಡ ಪಾಲ್ಗೊಂಡು ಗಮನ ಸೆಳೆದಿದ್ದಾನೆ. ಜೆಕೆಎಲ್ಎಫ್ ಸಂಘಟನೆಯ ಜಾವಿದ್ ಮಿರ್, ಕಾಶ್ಮೀರ್ ಬಾರ್ ಅಸೋಸಿಯೇಶನ್ನ ಗುಲಾಂ ನಬಿ ಶಹೀನ್ ರ್ಯಾಲಿಯಲ್ಲಿ ಭಾಗವಹಿಸಿದ್ದಾರೆ. ಇದು ಕಣಿವೆಯಲ್ಲಾದ ಸಕಾರಾತ್ಮಕ ಬದಲಾವಣೆಗೆ ಸಾಕ್ಷಿ ಎಂದು ರ್ಯಾಲಿಯಲ್ಲಿ ಪಾಲ್ಗೊಂಡಿದ್ದವರು ಅಭಿಪ್ರಾಯಪಟ್ಟಿದ್ದಾರೆ.
ಸತತ 10ನೇ ಬಾರಿಗೆ ಮೋದಿ ಭಾಷಣ
ಮಂಗಳವಾರ ಬೆಳಗ್ಗೆ 7.33ಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ದಿಲ್ಲಿಯ ಕೆಂಪುಕೋಟೆಯಲ್ಲಿ ರಾಷ್ಟ್ರ ಧ್ವಜಾರೋಹಣ ಮಾಡಲಿದ್ದು, ಅನಂತರ ದೇಶವನ್ನುದ್ದೇಶಿಸಿ ಮಾತನಾ ಡಲಿದ್ದಾರೆ. ಇದು ಅವರು ಸತತ 10ನೇ ಸ್ವಾತಂತ್ರ್ಯೋತ್ಸವ ಭಾಷಣ ವಾಗಿದೆ.
2024ರಲ್ಲಿ ಲೋಕಸಭೆ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಅವರು ತಮ್ಮ ಭಾಷಣದಲ್ಲಿ ಸರಕಾರದ ರಿಪೋರ್ಟ್ ಕಾರ್ಡ್ ಅನ್ನು ದೇಶದ ಜನರ ಮುಂದೆ ತೆರೆದಿಡುವ ಸಾಧ್ಯತೆಯಿದೆ. ಜತೆಗೆ ಈ ಹಿಂದಿನಂತೆ ಈ ಬಾರಿಯೂ ಕೆಲವು ಮಹತ್ವದ ಯೋಜನೆಗಳನ್ನು ಘೋಷಿಸುವ ಸಾಧ್ಯತೆಯಿದೆ. 2019ರ ಭಾಷಣದಲ್ಲಿ ಅವರು ರಕ್ಷಣ ಪಡೆಗಳ ಮುಖ್ಯಸ್ಥರ ನೇಮಕದ ಬಗ್ಗೆ, 2021ರಲ್ಲಿ ಗತಿ ಶಕ್ತಿ ಯೋಜನೆ ಮತ್ತು 75 ವಂದೇ ಭಾರತ್ ಎಕ್ಸ್ಪ್ರೆಸ್ ರೈಲುಗಳನ್ನು ಉದ್ಘಾಟಿಸುವ ಯೋಜನೆ ಬಗ್ಗೆ ಘೋಷಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Goldy Brar: ಸಿಧು ಮೂಸೆವಾಲಾ ಹತ್ಯೆಯ ಮಾಸ್ಟರ್ ಮೈಂಡ್; ಗೋಲ್ಡಿ ಬ್ರಾರ್ ಶೂಟೌಟ್ – ವರದಿ
ಸಲ್ಮಾನ್ ನಿವಾಸದ ಮೇಲೆ ಗುಂಡಿನ ದಾಳಿ: ಪೊಲೀಸ್ ಕಸ್ಟಡಿಯಲ್ಲಿದ್ದ ಆರೋಪಿ ಆತ್ಮಹತ್ಯೆ – ವರದಿ
Panaji: ವಿಮಾನ ನಿಲ್ದಾಣದಲ್ಲಿ ಬಾಂಬ್! ಇ-ಮೇಲ್ ಮೂಲಕ ಬೆದರಿಕೆ
Rupali Ganguly : ʼಅನುಪಮಾʼ ಧಾರಾವಾಹಿ ಖ್ಯಾತಿಯ ನಟಿ ರೂಪಾಲಿ ಗಂಗೂಲಿ ಬಿಜೆಪಿ ಸೇರ್ಪಡೆ
ಧ್ರುವ್ ರಾಠಿ ಮುಸ್ಲಿಂ, ಆತನ ಪತ್ನಿ ಪಾಕಿಸ್ತಾನಿ: ವೈರಲ್ ಪೋಸ್ಟ್ನ ಸತ್ಯಾಸತ್ಯತೆ ಏನು?
MUST WATCH
ಹೊಸ ಸೇರ್ಪಡೆ
ಮುಸ್ಲಿಮರು ಮೋದಿ ಬೆಂಬಲಿಸಲಿ: ರಮೇಶ ಜಾರಕಿಹೊಳಿ
Bidar: ರಾಜ್ಯದ 28 ಸ್ಥಾನದಲ್ಲೂ ಕಾಂಗ್ರೆಸ್ಗೆ ಗೆಲುವು: ಮುನಿಯಪ್ಪ ವಿಶ್ವಾಸ
Pushpa 2 First single: ʼಪುಷ್ಪ ಪುಷ್ಪʼ ಎನ್ನುತ್ತಾ ಹಾಡಿನಲ್ಲಿ ಮಿಂಚಿದ ಅಲ್ಲು ಅರ್ಜುನ್
BJP-JDS ಒಟ್ಟಾಗಿ ಹೋಗುವುದರಲ್ಲಿ ಎರಡು ಮಾತಿಲ್ಲ… : ಬಿಎಸ್ ವೈ
Goldy Brar: ಸಿಧು ಮೂಸೆವಾಲಾ ಹತ್ಯೆಯ ಮಾಸ್ಟರ್ ಮೈಂಡ್; ಗೋಲ್ಡಿ ಬ್ರಾರ್ ಶೂಟೌಟ್ – ವರದಿ