ಕನಸಿನ ರೆಕ್ಕೆಗೆ ಪಕೋಡಾ ಕಟ್ಟಿದ!
ಉತ್ತರಾಖಂಡ ಯುವ ಇಂಜಿನಿಯರ್ನ ಸಾಹಸ ಗಾಥೆ
Team Udayavani, Jun 15, 2019, 5:00 AM IST
ಪಿಪಲ್ಕೋಟಿ (ಉತ್ತರಾಖಾಂಡ): ಸಾಗರ್ ಶಾ ಎಂಬ ಹೆಸರಿನ ಆ ಹುಡುಗ ಇಂಜಿನಿಯರಿಂಗ್ ಕಲಿತವ. ಎಂ.ಟೆಕ್ ಸೇರಲು ಬಯಸಿದ್ದ ಆತ ಅದಕ್ಕಾಗಿ ಗೇಟ್ ಪ್ರವೇಶ ಪರೀಕ್ಷೆಯನ್ನೂ ಬರೆದು ಅದರಲ್ಲಿ 8000 ಆಜುಬಾಜಿನ ರ್ಯಾಂಕ್ ಪಡೆದಿದ್ದ. ದೇಶದ ಯಾವುದೇ ಉತ್ತಮ ದರ್ಜೆಯ “ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ’ (ಎನ್ಐಟಿ) ಸೇರಲು ಆತನಿಗೆ ಅವಕಾಶವಿತ್ತು. ಆದರೆ, ಅದೊಂದು ದಿನ ಏಕಾಏಕಿ ತನ್ನ ನಿರ್ಧಾರ ಬದಲಿಸಿ ಪಕೋಡಾ ಅಂಗಡಿ ತೆರೆಯಲು ತೀರ್ಮಾನಿಸಿದ!
ಅದಾಗಿ, ಎರಡು ವರ್ಷ ಕಳೆದಿದೆ. ಈಗ ಆತ ಹೇಗಿದ್ದಾನೆ ಎಂಬುದಕ್ಕೆ ಅಲ್ಲಿಯೇ ಹೋಗಿ ನೋಡಬೇಕು. ಉತ್ತರಾಖಂಡದಲ್ಲಿನ ತನ್ನ ಊರಾದ ಚಮೋಲಿ ಜಿಲ್ಲೆಯ ಪಿಪಲ್ಕೋಟಿಯ ಬಳಿಯಿರುವ ಬದ್ರಿನಾಥ್-ಹೇಮಕುಂಡ್ ಸಾಹಿಬ್ ಹೆದ್ದಾರಿ ಮಗ್ಗು ಲಲ್ಲೇ ಇರುವ ಪಕೋಡಾ ಅಂಗಡಿಗೆ ಭೇಟಿ ನೀಡದ ಪ್ರಯಾಣಿಕರೇ ಅತಿ ವಿರಳ. ಪ್ರವಾಸದ ಸೀಸನ್ನಲ್ಲಂತೂ ಭರ್ಜರಿ ವ್ಯಾಪಾರ.
ಎರಡು ವರ್ಷಗಳ ಹಿಂದೆ ಬಡತನದ ಕಾರಣದಿಂದಾಗಿ ತಾನು ಕೈಗೊಂಡಿದ್ದ ನಿರ್ಧಾರದ ಬಗ್ಗೆ ಈಗ ಆತ ಹೆಮ್ಮೆ ಪಡುತ್ತಾನೆ. ಅಂದಿನ ಕಷ್ಟ ಈಗಿಲ್ಲ. ಸಂತೋಷವಾಗಿದ್ದೇನೆ ಎಂದು ಮೂಲಕ ಅವರು, ಪ್ರಧಾನಿ ಮೋದಿಯವರ “ಪಕೋಡಾ’ ಹೇಳಿಕೆಯ ಅತ್ಯುತ್ತಮ ನಿದರ್ಶನವಾಗಿದ್ದಾರೆ.