ಜಾರ್ಖಂಡ್ : ಧರಣಿ ನಿರತ ಗುತ್ತಿಗೆ ಶಿಕ್ಷಕ ಕೊರೆವ ಚಳಿಗೆ ಬಲಿ
Team Udayavani, Dec 17, 2018, 3:57 PM IST
ಡುಮ್ಕಾ, ಜಾರ್ಖಂಡ್ : ಸೇವಾ ಕ್ರಮಬದ್ಧತೆ ಮತ್ತು ಇತರ ಕೆಲವು ಬೇಡಿಕೆಗಳನ್ನು ಒತ್ತಾಯಿಸಿ ಜಾರ್ಖಂಡ್ ಕಲ್ಯಾಣ ಸಚಿವ ಲೂಯಿಸ್ ಮರಾಂಡಿ ಅವರ ಮನೆಯ ಮುಂದೆ ಅಹೋರಾತ್ರಿ ಆವರ್ತನ ಧರಣಿ ಮುಷ್ಕರದಲ್ಲಿ ಕುಳಿತಿದ್ದ 40ರ ಹರೆಯದ ಕಾಂಚನ ದಾಸ್ ಎಂಬ ಗುತ್ತಿಗೆ ಆಧಾರಿತ ಶಿಕ್ಷಕ ಕೊರೆವ ಚಳಿಯನ್ನು ತಾಳಲಾರದೆ ಮೃತ ಪಟ್ಟಿರುವುದು ವರದಿಯಾಗಿದೆ.
ಸಚಿವ ಮರಾಂಡಿ ಅವರ ನಿವಾಸದ ಮುಂದೆ ಗುತ್ತಿಗೆ ಶಿಕ್ಷಕರು ತಮ್ಮ ಸೇವಾ ಕ್ರಮಬದ್ಧತೆಯನ್ನು ಆಗ್ರಹಿಸಿ ಕಳೆದ ನ.21ರಿಂದ ಆವರ್ತನ ಧರಣಿ ನಡೆಸುತ್ತಿದ್ದಾರೆ. ಶಿಕ್ಷಕ ಕಾಂಚನ ದಾಸ್ ಅವರು ಕಳೆದ ಶನಿವಾರ ರಾತ್ರಿ ಮೃತಪಟ್ಟರೆಂದು ಸಹ-ಪ್ರತಿಭಟನಕಾರರು ತಿಳಿಸಿದ್ದಾರೆ.
ಜಾರ್ಖಂಡ್ ಗುತ್ತಿಗೆ ಶಿಕ್ಷಕರು ಕಳೆದ ಮೂರು ತಿಂಗಳಿಂದಲೂ ತಮ್ಮ ವಿವಿಧ ಬೇಡಿಕೆ ಆಗ್ರಹಿಸಿ ಆಂದೋಲನ ನಡೆಸುತ್ತಿದ್ದಾರೆ.