ಕಾರು ಚಾಲಕನಿಗೆ ಸಹಾಯ ಮಾಡಲು ಹೋದ ಖ್ಯಾತ ಡಾಕ್ಟರ್ ಪಾಲಿಗೆ ಯಮನಾದ ಬಸ್
3,500 ಸರ್ಜರಿ ಮಾಡಿದ್ದ ಖ್ಯಾತ ವೈದ್ಯ ಪುಣೆಯ ಖುರ್ಜೆಕರ್
Team Udayavani, Sep 16, 2019, 6:01 PM IST
ಪುಣೆ: ಪಂಚರ್ ಆಗಿದ್ದ ಕ್ಯಾಬ್ ನ ಟಯರ್ ಬದಲಾಯಿಸುತ್ತಿದ್ದ ಚಾಲಕನಿಗೆ ನೆರವು ನೀಡಲು ಹೋಗಿದ್ದ ಪುಣೆ ಮೂಲದ ಸರ್ಜನ್ ಹಾಗೂ ಚಾಲಕನ ಮೇಲೆ ಖಾಸಗಿ ಬಸ್ ವೊಂದು ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ದಾರುಣ ಘಟನೆ ಮಹಾರಾಷ್ಟ್ರದ ಮುಂಬೈ-ಪುಣೆ ಎಕ್ಸ್ ಪ್ರೆಸ್ ಹೆದ್ದಾರಿಯಲ್ಲಿ ಸೋಮವಾರ ನಡೆದಿದೆ.
ಖ್ಯಾತ ಬೆನ್ನುಮೂಳೆ ತಜ್ಞ ಡಾ.ಕೇತನ್ ಖುರ್ಜೆಕರ್ (44ವರ್ಷ) ಹಾಗೂ ಇತರ ಇಬ್ಬರು ಓರ್ಥೋಪೆಡಿಕ್ ಸರ್ಜನ್ಸ್ ಮುಂಬೈನಿಂದ ಕ್ಯಾಬ್ ನಲ್ಲಿ ಪುಣೆಗೆ ಆಗಮಿಸುತ್ತಿದ್ದಾಗ ಸೋಮಠಾಣೆ ಗ್ರಾಮದ ಬಳಿ ಈ ದುರ್ಘಟನೆ ನಡೆದಿದೆ ಎಂದು ತಾಲೇಗಾಂವ್ ಡಾಬ್ಡೇ ಪೊಲೀಸ್ ಠಾಣೆಯ ಇನ್ಸೆಪೆಕ್ಟರ್ ಕಿಶೋರ್ ಮಾಸ್ವಾಡೇ ತಿಳಿಸಿದ್ದಾರೆ.
ಇವರ ಕ್ಯಾಬ್ ಸೋಮಠಾಣೆ ಸಮೀಪ ಬಂದಾಗ ಕಾರಿನ ಟಯರ್ ಪಂಚರ್ ಆಗಿತ್ತು. ಚಾಲಕ ಕ್ಯಾಬ್ ಅನ್ನು ರಸ್ತೆ ಪಕ್ಕ ನಿಲ್ಲಿಸಿ ಕೆಳಗಿಳಿದಿದ್ದ. ಈ ಸಂದರ್ಭದಲ್ಲಿ ಕಾರಿನಲ್ಲಿದ್ದ ಡಾ.ಖುರ್ಜೆಕರ್ ಸೇರಿದಂತೆ ಎಲ್ಲರೂ ಕೆಳಗಿಳಿದಿದ್ದರು. ಡಾ.ಖುರ್ಜೆಕರ್ ಅವರು ಕ್ಯಾಬ್ ಡ್ರೈವರ್ ಧ್ಯಾನೇಶ್ವರ್ ಭೋಸ್ಲೆ(27)ಗೆ ಟಯರ್ ಬದಲಾಯಿಸಲು ಸಹಾಯ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಹಿಂದಿನಿಂದ ಬಂದ ಬಸ್ ಡಿಕ್ಕಿ ಹೊಡೆದು ಬಿಟ್ಟಿದ್ದ. ಇದರ ಪರಿಣಾಮ ಡಾ.ಖುರ್ಜೆಕರ್ ಮತ್ತು ಚಾಲಕ ಬೋಸ್ಲೆ ಸ್ಥಳದಲ್ಲೇ ಸಾವನ್ನಪ್ಪಿದ್ದರು.
ಉಳಿದ ಇಬ್ಬರು ವೈದ್ಯರುಗಳು ಗಾಯಗೊಂಡಿದ್ದು ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಡಾ.ಖುರ್ಜೆಕರ್ ಚಿನ್ನದ ಪದಕ ಗಳಿಸಿದ್ದ ವಿದ್ಯಾರ್ಥಿಯಾಗಿದ್ದರು. ಸಾನ್ ಚೇಟಿ ಆಸ್ಪತ್ರೆಯಲ್ಲಿ ಬೆನ್ನುಮೂಳೆ ವಿಭಾಗದ ಮುಖ್ಯಸ್ಥರಾಗಿದ್ದರು. ಈವರೆಗೆ ಸುಮಾರು 3,500 ಸರ್ಜರಿಗಳನ್ನು ಮಾಡಿದ್ದರು ಎಂದು ವರದಿ ತಿಳಿಸಿದೆ.