ಐಎಎಫ್ ಹಣ ಅಂಬಾನಿ ಜೇಬಿಗೆ: ರಾಹುಲ್ ಟೀಕೆ
Team Udayavani, Mar 3, 2019, 12:30 AM IST
ರಾಂಚಿ: ರಫೇಲ್ ಒಪ್ಪಂದದ ವಿವಾದವನ್ನು ಮತ್ತೆ ಕೆದಕಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಈಗ ದೇಶಾದ್ಯಂತ ಸುದ್ದಿಯಲ್ಲಿರುವ ಭಾರತೀಯ ವಾಯು ಪಡೆಯ (ಐಎಎಫ್) ಹೆಸರನ್ನು ಬಳಸಿಕೊಂಡು ಪ್ರಧಾನಿ ಮೋದಿ ವಿರುದ್ಧ ಟೀಕಾಸ್ತ್ರ ಪ್ರಯೋಗಿಸಿದ್ದಾರೆ. ರಾಂಚಿಯಲ್ಲಿ ಆಯೋಜಿಸಲಾಗಿದ್ದ ಪಕ್ಷದ ಪರಿವರ್ತನಾ ರ್ಯಾಲಿಯಲ್ಲಿ ಭಾಗವಹಿಸಿದ್ದ ಅವರು, “”ದೇಶದ ಬೆಂಗಾವಲಾಗಿರುವ ಭಾರತೀಯ ವಾಯು ಸೇನೆಗೆ ಸೇರಬೇಕಾದ 30,000 ಕೋಟಿ ರೂ. ಹಣವನ್ನು ಪ್ರಧಾನಿ ನರೇಂದ್ರ ಮೋದಿ, ಉದ್ಯಮಿ ಅನಿಲ್ ಅಂಬಾನಿಯವರ ಜೇಬಿಗೆ ಇಳಿಸಿದ್ದಾರೆ” ಎಂದು ಆರೋಪಿಸಿದ್ದಾರೆ.
“ಚೌಕೀದಾರ್ ಚೋರ್ ಹೈ’ ಎಂದು ತಾವು ಹಿಂದೆ ಟೀಕಿಸಿದ್ದನ್ನು ದೇಶದ ನಾನಾ ಕ್ಷೇತ್ರಗಳಲ್ಲಿ ದುಡಿಯುತ್ತಿರುವ ಚೌಕೀದಾರರು (ಕಾವಲುಗಾರರು) ತಪ್ಪು ತಿಳಿದುಕೊಳ್ಳಬಾರದು ಎಂದ ರಾಹುಲ್, “”ನಾನು ಆ ಪದವನ್ನು ಯಾರಿಗೆ ಹೇಳಿದ್ದೇನೆಂಬುದು ದೇಶದ ಜನತೆಗೆ ಗೊತ್ತಿದೆ” ಎಂದು ನುಡಿದಿದ್ದಾರೆ. ಅಲ್ಲದೆ, “ಎಲ್ಲ ಚೌಕೀದಾರರು ಕಳ್ಳರಲ್ಲ, ಕೇವಲ ದೇಶದ ಚೌಕಿದಾರ ಮಾತ್ರ ಕಳ್ಳ’ ಎಂದೂ ಹೇಳಿದ್ದಾರೆ.