ಅಮೇಠಿಯಲ್ಲಿ ರಾಹುಲ್ ನಾಮಪತ್ರ
ಕುಟುಂಬದ ಸದಸ್ಯರು, ಕಾರ್ಯಕರ್ತರು ಸಾಥ್
Team Udayavani, Apr 11, 2019, 6:00 AM IST
ತಾಯಿ ಸೋನಿಯಾ ಗಾಂಧಿ ಸಮ್ಮುಖದಲ್ಲಿ ರಾಹುಲ್ ಗಾಂಧಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಾಮ ಪತ್ರ ಸಲ್ಲಿಸಿದರು.
ಅಮೇಠಿ: ಉತ್ತರ ಪ್ರದೇಶದ ಅಮೇಠಿಯಲ್ಲಿ ಬುಧವಾರ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ನಾಮಪತ್ರ ಸಲ್ಲಿಸಿದ್ದು, ತಾಯಿ ಸೋನಿಯಾ ಗಾಂಧಿ, ಸೋದರಿ ಪ್ರಿಯಾಂಕಾ ವಾದ್ರಾ ಸೇರಿದಂತೆ ಇಡೀ ಗಾಂಧಿ ಪರಿವಾರವೇ ಜತೆಗಿತ್ತು. ಇದಕ್ಕೂ ಮೊದಲು ಮೂರು ಕಿ.ಮೀ. ರೋಡ್ಶೋ ಅನ್ನೂ ರಾಹುಲ್ ನಡೆಸಿ, ನಂತರ ಗೌರಿಗಂಜ್ನಲ್ಲಿರುವ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದ್ದಾರೆ.
ರೋಡ್ಶೋಗೆ ಸಾವಿರಾರು ಸಂಖ್ಯೆಯಲ್ಲಿ ಕಾರ್ಯ ಕರ್ತರು ರಸ್ತೆಯ ಇಕ್ಕೆಲಗಳಲ್ಲಿ ಸೇರಿ, ರಾಹುಲ್ ಗಾಂಧಿ ಹಾಗೂ ಕುಟುಂಬದ ಮೇಲೆ ಪುಷ್ಪವೃಷ್ಟಿ ಮಾಡಿದರು. ಮುನ್ಶಿಗಂಜ್, ದರ್ಪಿಪುರ ಮತ್ತು ಗೌರಿಗಂಜ್ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ರೋಡ್ ಶೋ ತೆರಳಿದೆ.
ರ್ಯಾಲಿಯಲ್ಲಿ ಸೋನಿಯಾ ಗಾಂಧಿ, ಪ್ರಿಯಾಂಕಾ ವಾದ್ರಾ, ಅವರ ಪತಿ ರಾಬರ್ಟ್ ಮತ್ತು ಇಬ್ಬರು ಮಕ್ಕಳೂ ಭಾಗವಹಿಸಿದ್ದರು. ಈ ಮೂಲಕ ಇಡೀ ಕುಟುಂಬವೇ ರಾಹುಲ್ ಬೆಂಬಲಕ್ಕಿದೆ ಎಂಬುದನ್ನು ಸಾಬೀತು ಪಡಿಸಿದಂತಾಗಿದೆ. ರೋಡ್ ಶೋ ನಡೆಯುವ ಸಂದರ್ಭದಲ್ಲಿ ರಸ್ತೆಯ ಎರಡೂ ಬದಿಗಳಲ್ಲಿ ಜನರು ತಮ್ಮ ನೇತಾರನನ್ನು ಕುತೂಹಲದಿಂದ ನೋಡುತ್ತಿದ್ದರು.
ಅಮೇಠಿಯಿಂದ ರಾಹುಲ್ ಸತತ ಮೂರು ಬಾರಿ ಆಯ್ಕೆಯಾಗಿದ್ದು, ಈ ಬಾರಿ ಆಯ್ಕೆಯಾದಲ್ಲಿ ಒಟ್ಟು 20 ವರ್ಷ ಗಳವರೆಗೆ ಅಮೇಠಿ ಸಂಸದರಾಗಿ ರಾಹುಲ್ ಇರಲಿದ್ದಾರೆ. ಅಮೇಠಿಯಲ್ಲಿ ಮೇ 6 ರಂದು ಮತದಾನ ನಡೆಯಲಿದೆ. ರಾಹುಲ್ ಈ ಬಾರಿ 2ನೇ ಕ್ಷೇತ್ರವಾಗಿ ಕೇರಳದ ವಯನಾಡ್ನಿಂದಲೂ ಸ್ಪರ್ಧಿಸಿದ್ದಾರೆ. ತಮ್ಮ ಅಫಿಡವಿಟ್ ನಲ್ಲಿ ಕೇಂಬ್ರಿಜ್ ಯೂನಿವರ್ಸಿಟಿಯ ಟ್ರಿನಿಟಿ ಕಾಲೇಜಿ ನಿಂದ ಅಭಿವೃದ್ಧಿ ಅಧ್ಯಯನದಲ್ಲಿ ಎಂಫಿಲ್ ಪದವಿ ಪಡೆದಿರುವುದಾಗಿ ಘೋಷಿಸಿದ್ದಾರೆ.
ರಾಹುಲ್ ಬಳಿ ಕಾರೇ ಇಲ್ಲ!
ರಾಹುಲ್ ಆಸ್ತಿ 2014 ರಲ್ಲಿ 9.4 ಕೋಟಿ ರೂ. ಇಂದ 15.8 ಕೋಟಿ ರೂ.ಗೆ ಏರಿಕೆ ಕಂಡಿದೆ. ಬುಧವಾರ ಅಮೇಠಿಯಲ್ಲಿ ನಾಮಪತ್ರ ಸಲ್ಲಿಸುವಾಗ ಆಸ್ತಿ ವಿವರವನ್ನು ರಾಹುಲ್ ನೀಡಿದ್ದು, ಇದರಲ್ಲಿ 5.80 ಕೋಟಿ ರೂ. ಚರಾಸ್ತಿ ಹೊಂದಿರುವುದಾಗಿ ಘೋಷಿಸಿದ್ದಾರೆ. ಅಲ್ಲದೆ, 15 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಯನ್ನು ಹೊಂದಿರುವುದಾಗಿ ನಮೂದಿಸಿದ್ದಾರೆ. ಆದರೆ ತನ್ನ ಬಳಿ ಕಾರ್ ಇಲ್ಲ ಎಂದು ಅವರು ಘೋಷಿಸಿದ್ದಾರೆ. ಗುರುಗ್ರಾಮದಲ್ಲಿ 8.75 ಕೋಟಿ ರೂ. ಮೌಲ್ಯದ ವಾಣಿಜ್ಯ ಉದ್ದೇಶದ ಸ್ವತ್ತು, 1.32 ಕೋಟಿ ರೂ. ಮೌಲ್ಯದ ಕೃಷಿ ಭೂಮಿ ಯನ್ನು ಹೊಂದಿದ್ದಾರೆ. ಸಂಸದನಾಗಿ ಪಡೆದ ಸಂಬಳ, ರಾಯಲ್ಟಿ ಆದಾಯ, ಬಾಡಿಗೆ, ಬಾಂಡ್ ಮತ್ತು ಡಿವಿಡೆಂಡ್ಗಳಿಂದ ಬಂದ ಬಡ್ಡಿ, ಮ್ಯೂಚುವಲ್ ಫಂಡ್ಗಳಿಂದ ಬಂದ ಹಣವೇ ಆದಾಯಕ್ಕೆ ಮೂಲ ಎಂದು ರಾಹುಲ್ ಹೇಳಿಕೊಂಡಿದ್ದಾರೆ.
2 ಭಾರತ ಸೃಷ್ಟಿಗೆ ಪಿಎಂ ಯತ್ನ
ಪ್ರಧಾನಿ ನರೇಂದ್ರ ಮೋದಿ ಎರಡು ಭಾರತ ಸೃಷ್ಟಿಗೆ ಪ್ರಯತ್ನ ಮಾಡುತ್ತಿ ದ್ದಾರೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಆರೋಪ ಮಾಡಿದ್ದಾರೆ. ಪಶ್ಚಿಮ ಬಂಗಾಲದ ರಾಯ್ಗಂಜ್ ಮತ್ತು ಬಿಹಾರದ ಕತಿಹಾರ್ನಲ್ಲಿ ಅವರು ಬುಧವಾರ ಸಾರ್ವಜನಿಕ ಸಭೆಗಳನ್ನು ಉದ್ದೇಶಿಸಿ ಮಾತನಾಡಿ ದರು. ಪಶ್ಚಿಮ ಬಂಗಾಲದ ರಾಯ್ಗಂಜ್ನಲ್ಲಿ ಮಾತನಾಡಿದ ಕಾಂಗ್ರೆಸ್ ಅಧ್ಯಕ್ಷ ನೀರವ್ ಮೋದಿ, ಅನಿಲ್ ಅಂಬಾನಿಯವರಂಥ ಶ್ರೀಮಂತರಿಗಾಗಿ ಮತ್ತು ಬಡವರಿಗಾಗಿ ಭಾರತವನ್ನು ವಿಭಜಿಸಲು ಮುಂದಾಗಿದ್ದಾರೆ. ಕಾಂಗ್ರೆಸ್ ನೇತೃತ್ವದ ಮೈತ್ರಿಕೂಟ ಸರಕಾರ ಚುನಾವಣೆಯಲ್ಲಿ ಗೆದ್ದು ಅಧಿಕಾರಕ್ಕೆ ಬಂದರೆ ರಫೇಲ್ ಡೀಲ್ನಲ್ಲಿ ಉಂಟಾಗಿರುವ ಅವ್ಯಹಾರಗಳ ಬಗ್ಗೆ ತನಿಖೆ ನಡೆಸಲಾಗುತ್ತದೆ ಎಂದು ಹೇಳಿದ್ದಾರೆ. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹಿಂದಿನ ವರ್ಷಗಳಲ್ಲಿ ಬಿಜೆಪಿ ಜತೆಗೆ ಮಾಡಿಕೊಂಡಿದ್ದ ಮೈತ್ರಿಯನ್ನು ಈಗ ಮರೆತಿದ್ದಾರೆ ಎಂದು ದೂರಿದ್ದಾರೆ. ಬಿಹಾರದ ಕತಿಹಾರ್ನಲ್ಲಿ ಮಾತನಾಡಿದ ರಾಹಲ್ ಗಾಂಧಿ 15 ಮಂದಿ ಉದ್ಯಮಪತಿಗಳು ಬ್ಯಾಂಕ್ಗಳಲ್ಲಿ ಮಾಡಿದ 3.5 ಲಕ್ಷ ಕೋಟಿ ರೂ. ಸಾಲವನ್ನು ಮನ್ನಾ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಇಂದು ಸೋನಿಯಾ ನಾಮಪತ್ರ
ಉತ್ತರ ಪ್ರದೇಶದ ರಾಯ್ಬರೇಲಿಯಿಂದ ಪುನರಾಯ್ಕೆ ಬಯಸಿರುವ ಕಾಂಗ್ರೆಸ್ನ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಗುರುವಾರ ನಾಮಪತ್ರ ಸಲ್ಲಿಸಲಿದ್ದಾರೆ. ಇದಕ್ಕಿಂತ ಮೊದಲು ನವ ದಿಲ್ಲಿಯ ಕಾಂಗ್ರೆಸ್ ಪ್ರಧಾನ ಕಚೇರಿಯಲ್ಲಿ ವಿಶೇಷ ಹೋಮ ಮತ್ತು ಇತರ ಧಾರ್ಮಿಕ ಕಾರ್ಯ ಕ್ರಮ ಗಳಲ್ಲಿ ಭಾಗವಹಿಸಲಿದ್ದಾರೆ. ರಾಯ್ ಬರೇಲಿ ಯಲ್ಲಿ 700 ಮೀಟರ್ ದೂರದಷ್ಟು ವರೆಗೆ ರೋಡ್ ಶೋ ನಡೆಸಲಿದ್ದಾರೆ ಸೋನಿಯಾ ಗಾಂಧಿ. ಮೇ 6ರಂದು ನಡೆಯ ಲಿರುವ 5ನೇ ಹಂತದಲ್ಲಿ ಅಲ್ಲಿ ಮತದಾನ ನಡೆಯ ಲಿದೆ. ರಾಹುಲ್ ಗಾಂಧಿ, ಪ್ರಿಯಾಂಕಾ ವಾದ್ರಾ, ರಾಬರ್ಟ್ ವಾದ್ರಾ ಮತ್ತು ಕಾಂಗ್ರೆಸ್ನ ಪ್ರಮುಖರು ಈ ಸಂದರ್ಭದಲ್ಲಿ ಉಪಸ್ಥಿತರಿರಲಿದ್ದಾರೆ.
ಅಮ್ಮನ ಬಳಿ ಸಾಲ
72 ಲಕ್ಷ ರೂ. ಸಾಲವನ್ನು ವಿವಿಧ ಹಣಕಾಸು ಸಂಸ್ಥೆಗಳಲ್ಲಿ ಹೊಂದಿರುವ ರಾಹುಲ್, ತಾಯಿ ಸೋನಿಯಾ ಗಾಂಧಿಯಿಂದ 5 ಲಕ್ಷ ರೂ. ಸಾಲ ಪಡೆದಿರುವುದಾಗಿ ಘೋಷಿಸಿದ್ದಾರೆ. ರಾಹುಲ್ ಬಳಿ 333.300 ಗ್ರಾಂ ಚಿನ್ನದ ಆಭರಣ ಇದೆ. ಎನ್ಪಿಎಸ್, ಪೋಸ್ಟ್, ವಿಮೆ ಪಾಲಿಸಿಗಳು ಮತ್ತು ಇತರ ಮೂಲಗಳಲ್ಲಿ 39 ಲಕ್ಷ ರೂ. ಹೂಡಿಕೆ ಮಾಡಿದ್ದಾಗಿ ಹೇಳಿಕೊಂಡಿದ್ದಾರೆ. ಅಲ್ಲದೆ ಒಟ್ಟು 5 ಕೇಸ್ಗಳು ದಾಖಲಾಗಿವೆ ಎಂದೂ ರಾಹುಲ್ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ
Mahadev Betting App Case; ಮುಂಬೈ ಪೊಲೀಸರಿಂದ ನಟ ಸಾಹಿಲ್ ಖಾನ್ ಬಂಧನ
Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ
Congress ಗೆದ್ದರೆ ದೇಶದಲ್ಲಿ ಗೋ ಹತ್ಯೆ ಖಚಿತ: ಯೋಗಿ ಆದಿತ್ಯನಾಥ್
Goa; ದಿನಕ್ಕೆ ಒಂದೇ ಖರ್ಜೂರ ತಿನ್ನುತ್ತಿದ್ದ ಇಬ್ಬರು ಸಹೋದರರು ನಿಧನ