ಎಸ್ಬಿಐಗೆ ರಜನೀಶ್ ಸಾರಥ್ಯ
Team Udayavani, Oct 5, 2017, 6:25 AM IST
ನವದೆಹಲಿ: ದೇಶದ ಅತಿದೊಡ್ಡ ಬ್ಯಾಂಕ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಭಾರತೀಯ ಸ್ಟೇಟ್ಬ್ಯಾಂಕ್ (ಎಸ್ಬಿಐ)ನ ನೂತನ ಅಧ್ಯಕ್ಷರಾಗಿ ಬುಧವಾರ ರಜನೀಶ್ ಕುಮಾರ್ ನೇಮಕವಾಗಿದ್ದಾರೆ.
ಬ್ಯಾಂಕಿನ ಹಾಲಿ ಅಧ್ಯಕ್ಷೆಯಾಗಿರುವ ಅರುಂಧತಿ ಭಟ್ಟಾಚಾರ್ಯ ಅವರ ಅವಧಿ ಶುಕ್ರವಾರ ಕೊನೆಗೊಳ್ಳಲಿದ್ದು, ರಜನೀಶ್ ಕುಮಾರ್ ಅವರು ಮುಂದಿನ ಮೂರು ವರ್ಷಗಳವರೆಗೆ ಬ್ಯಾಂಕಿನ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಲಿದ್ದಾರೆ. ಇವರ ನೇಮಕಾತಿಯಗೆ ಕೇಂದ್ರ ಸಂಪುಟ ಅನುಮೋದನೆ ನೀಡಿದೆ ಎಂದು ಸಿಬ್ಬಂದಿ ಮತ್ತು ತರಬೇತಿ ಇಲಾಖೆ ತಿಳಿಸಿದೆ.
2015ರಲ್ಲಿ ಎಸ್ಬಿಐ ಮಂಡಳಿಗೆ ಸೇರಿದ್ದ ರಜನೀಶ್ ಅವರು, ವಿವಿಧ ಹುದ್ದೆಗಳನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ವಸೂಲಾಗದ ಸಾಲವು ಹೆಚ್ಚುತ್ತಿದ್ದು, ಬ್ಯಾಂಕುಗಳನ್ನು ಸಂಕಷ್ಟಕ್ಕೆ ನೂಕಿವೆ ಎಂಬ ಆರೋಪಗಳು ಕೇಳಿ ಬರುತ್ತಿರುವ ಸಮಯದಲ್ಲೆ ಕುಮಾರ್ ಅವರು ಅತಿದೊಡ್ಡ ಹೊಣೆಯನ್ನು ಹೊತ್ತಿದ್ದಾರೆ. ಇದುವರೆಗೆ ಸಾರ್ವಜನಿಕ ವಲಯದ ಬ್ಯಾಂಕಿನ ವಸೂಲಾಗದ ಸಾಲದ ಮೊತ್ತ 6.41ಲಕ್ಷ ಕೋಟಿ ರೂ.ಗೆ ತಲುಪಿದೆ.