ಓಟಿಗೆ ಮುನ್ನ RBI ಬಡ್ಡಿ ಮತ್ತೆ ದರ ಕಡಿತ; ಆರ್ಥಿಕತೆಗೆ BJP ವಿಜಯ ಬೆಸ್ಟ್: Reuters
Team Udayavani, Apr 2, 2019, 11:02 AM IST
ಬೆಂಗಳೂರು : ಇದೇ ಗುರುವಾರ ಭಾರತೀಯ ರಿಸರ್ವ್ ಬ್ಯಾಂಕಿನ ಮೂರು ದಿನಗಳ ಹಣಕಾಸು ನೀತಿ ಪರಾಮರ್ಶೆ ಸಭೆ ಕೊನೆಗೊಳ್ಳಲಿದ್ದು ನಿರಂತರ ಎರಡನೇ ಬಾರಿಗೆ ಆರ್ಬಿಐ ತನ್ನ ಪ್ರಮುಖ ಬಡ್ಡಿ ದರಗಳನ್ನು ಇಳಿಸಲಿದೆ ಎಂದು ಮೂಲಗಳು ಹೇಳಿವೆ.
ಆರ್ಬಿಐ ಕೈಗೊಳ್ಳುವ ಈ ರೇಟ್ ಕಟ್ ಲೋಕಸಭೆಯ ಮೊದಲ ಹಂತದ ಚುನಾವಣೆಗೆ ಸ್ವಲ್ಪ ಮೊದಲು ನಡೆಯಲಿದ್ದು ಬಿಜೆಪಿಯ ವಿಜಯವು ದೇಶದ ಆರ್ಥಿಕತೆಗೆ ಅನುಕೂಲಕರವಾಗಲಿದೆ ಎಂದು ರಾಯ್ಟರ್ಸ್ ಚುನಾವಣಾ ಸಮೀಕ್ಷಾ ವರದಿ ಹೇಳಿದೆ.
ಶಕ್ತಿಕಾಂತ ದಾಸ್ ಅವರು ಕಳೆದ ಡಿಸೆಂಬರ್ ನಲ್ಲಿ ಹೊಸ ಆರ್ಬಿಐ ಗವರ್ನರ್ ಆಗಿ ನೇಮಕಗೊಂಡ ಬಳಿಕದಲ್ಲಿ ಆರ್ಬಿಐ ನಡೆಸಲಿರುವ ನಿರಂತರ ಎರಡನೇ ರೇಟ್ ಕಟ್ ಇದಾಗಲಿದೆ. ಕಳೆದ ಫೆಬ್ರವರಿಯಲ್ಲಿ ದಾಸ್ ಅವರು ತಮ್ಮ ಮೊದಲ ಸಭೆಯಲ್ಲಿ ಆರ್ಬಿಐ ಬಡ್ಡಿ ದರ ಇಳಿಸಿ ಬ್ಯಾಂಕ್ ಸಾಲವನ್ನು ಆಕರ್ಷಕಗೊಳಿಸಿದ್ದರು.
ಹಣದುಬ್ಬರ ಕಡಿಮೆಯಾಗಿರುವುದು ಮತ್ತು ಆರ್ಥಿಕ ಬೆಳವಣಿಗೆ ಗತಿ ನಿಧಾನವಾಗಿರುವುದೇ ಮೊದಲಾದ ಕಾರಣ ನೀಡಿ ಆರ್ಬಿಐ ಗವರ್ನರ್ ದಾಸ್ ಅವರು ಬಡ್ಡಿ ದರ ಇಳಿಕೆಯನ್ನು ಸಮರ್ಥಿಸಿಕೊಂಡಿದ್ದರು. ಮಾತ್ರವಲ್ಲದೆ ಆರ್ಬಿಐ ನ ಮುಂಬರುವ ಹಣಕಾಸು ಪರಾಮರ್ಶೆಗಳು ಸಾಲ ಸೌಕರ್ಯವನ್ನು ಸುಲಭ ಗೊಳಿಸುವ ಉದ್ದೇಶ ಹೊಂದಿರುವುದರ ಸುಳಿವು ನೀಡಿದ್ದರು.