Cauvery ಬತ್ತದ ತ.ನಾಡಿನ ಜಲದಾಹ: ಹದಿನೈದು ದಿನಗಳ ಕಾಲ 5 ಸಾವಿರ ಕ್ಯುಸೆಕ್ ನೀರು ಹರಿಸಿ
ಕಾವೇರಿ ನೀರು ನಿಯಂತ್ರಣ ಸಮಿತಿಯಿಂದ ಶಿಫಾರಸು
Team Udayavani, Aug 29, 2023, 12:51 AM IST
ಹೊಸದಿಲ್ಲಿ/ಬೆಂಗಳೂರು: ಕಾವೇರಿ ನದಿ ನಿಯಂತ್ರಣ ಸಮಿತಿ (ಸಿಡಬ್ಲ್ಯುಆರ್ಸಿ)ಯು ಮಂಗಳವಾರದಿಂದ ಆರಂಭಿಸಿ 15 ದಿನಗಳ ವರೆಗೆ ಪ್ರತೀ ದಿನ 5 ಸಾವಿರ ಕ್ಯುಸೆಕ್ ನೀರು ಬಿಡುವಂತೆ ಶಿಫಾರಸು ಮಾಡಿದೆ. ಸಮಿತಿಯ ಈ ಶಿಫಾರಸು ಅಂತಿಮವಲ್ಲ ಎಂದಿರುವ ಕರ್ನಾಟಕ ರಾಜ್ಯ ಸರಕಾರ, ಮಂಗಳವಾರ ನಡೆಯಲಿರುವ ಕಾವೇರಿ ನದಿ ನೀರು ನಿರ್ವಹಣ ಪ್ರಾಧಿಕಾರ(ಸಿಡಬ್ಲ್ಯುಎಂಎ) ಸಭೆಯಲ್ಲಿ ಸಮರ್ಥ ವಾದ ಮಂಡನೆ ಮಾಡುವುದಾಗಿ ಹೇಳಿದೆ.
ಕಾವೇರಿ ನದಿ ನಿಯಂತ್ರಣ ಸಮಿತಿ ಸೋಮವಾರ ಸಭೆ ಸೇರಿತ್ತು. ಈ ಸಭೆಯಲ್ಲಿ ಕರ್ನಾಟಕ, ತಮಿಳುನಾಡು ಸಹಿತ ಕಾವೇರಿ ಜಲಾಶಯದ ಎಲ್ಲ ರಾಜ್ಯಗಳ ಪ್ರತಿನಿಧಿಗಳು ಭಾಗವಹಿಸಿದ್ದರು. ಇದರಲ್ಲಿ ಉಭಯ ರಾಜ್ಯಗಳ ವಾದ ಆಲಿಸಿದ ಬಳಿಕ ಸಮಿತಿಯು ಆ. 29ರಿಂದ ಆರಂಭಿಸಿ ಮುಂದಿನ 15 ದಿನಗಳ ವರೆಗೆ ದಿನವೂ 5 ಸಾವಿರ ಕ್ಯುಸೆಕ್ ನೀರು ಬಿಡಬಹುದು ಎಂದು ಪ್ರಾಧಿಕಾರಕ್ಕೆ ಶಿಫಾರಸು ಮಾಡಿತು.
ಇಂದು ಪ್ರಾಧಿಕಾರದ ಸಭೆ
ಮಂಗಳವಾರ ಹೊಸದಿಲ್ಲಿಯಲ್ಲಿ ಕಾವೇರಿ ನದಿ ನಿರ್ವಹಣ ಪ್ರಾಧಿಕಾರದ ಸಭೆ ನಡೆಯಲಿದ್ದು, ಇದರಲ್ಲಿ ನೀರು ಬಿಡುವ ಸಂಬಂಧ ಅಂತಿಮ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ.
ಸೆ. 1: ಸುಪ್ರೀಂನಲ್ಲಿ ವಿಚಾರಣೆ
ತಮಿಳುನಾಡು ಸಲ್ಲಿಸಿರುವ ಅರ್ಜಿ ಕುರಿತಂತೆ ಇದೇ ಶುಕ್ರವಾರ ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಲಿದೆ. ತತ್ಕ್ಷಣವೇ ನೀರು ಬಿಡುಗಡೆಗಾಗಿ ಮಧ್ಯಾಂತರ ಆದೇಶ ನೀಡಬೇಕು ಎಂಬ ತಮಿಳುನಾಡು ವಾದವನ್ನು ಸುಪ್ರೀಂ ಕೋರ್ಟ್ ಒಪ್ಪಿರಲಿಲ್ಲ.
ಉಪ ಮುಖ್ಯಮಂತ್ರಿ ಡಿಕೆಶಿ,ಕಾನೂನು ತಜ್ಞರ ತಂಡ, ಜಲಸಂಪನ್ಮೂಲ ಇಲಾಖೆ ಜತೆ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳುತ್ತೇವೆ. ಸುಪ್ರೀಂಕೋರ್ಟ್ನಲ್ಲಿ ಮನವಿ ಸಲ್ಲಿಸಬೇಕೇ ಎಂಬುದರ ಸಹಿತ ಮುಂದಿನ ಕ್ರಮಗಳ ಬಗ್ಗೆ ತೀರ್ಮಾನಿಸಲಾಗುತ್ತದೆ.
-ಸಿದ್ದರಾಮಯ್ಯ, ಮುಖ್ಯಮಂತ್ರಿ