ಮೀಸಲಾತಿ ರದ್ದು ಮಾಡಲ್ಲ
Team Udayavani, Jun 11, 2018, 4:57 PM IST
ಅಂಬಿಕಾಪುರ: ಬಿಜೆಪಿ ನೇತೃತ್ವದ ಸರಕಾರ ಅಧಿಕಾರದಲ್ಲಿರುವವರೆಗೂ ಎಸ್ಸಿ/ಎಸ್ಟಿ ಕಾಯ್ದೆ ಮತ್ತು ಉದ್ಯೋಗದಲ್ಲಿ ಮೀಸಲಾತಿ ವ್ಯವಸ್ಥೆ ಇದ್ದೇ ಇರುತ್ತದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ.
ರವಿವಾರ ಛತ್ತೀಸ್ಗಡ ವಿಧಾನಸಭಾ ಚುನಾವಣೆಗೆ ಪ್ರಚಾರದ ಕಹಳೆ ಊದಿರುವ ಅಮಿತ್ ಶಾ ಅವರು, ಮೋದಿ ಸರಕಾರದ ವಿರುದ್ಧ ಕಾಂಗ್ರೆಸ್ ಸುಳ್ಳುಗಳನ್ನು ಹಬ್ಬಿಸುತ್ತಿದೆ ಎಂದು ಆರೋಪಿಸಿದ್ದಾರೆ. ಇಲ್ಲಿ ಸದ್ಯದಲ್ಲೇ ಚುನಾವಣೆ ನಡೆಯಲಿದೆ. ಹಾಗಾಗಿ, ಕಾಂಗ್ರೆಸಿಗರು ಜನರ ದಾರಿ ತಪ್ಪಿಸಲು ಪ್ರಯತ್ನಿಸುತ್ತಾರೆ. ಬಿಜೆಪಿ ಸರಕಾರ ಎಸ್ಸಿ, ಎಸ್ಟಿ ಕಾಯ್ದೆ ರದ್ದು ಮಾಡುತ್ತದೆ, ಮೀಸಲಾತಿ ತೆಗೆದುಹಾಕುತ್ತದೆ ಎಂದೆಲ್ಲ ಸುಳ್ಳು ಹೇಳುತ್ತಾರೆ. ನಾವು ಅಧಿಕಾರದಲ್ಲಿ ಇರುವವರೆಗೂ ಈ ಕಾಯ್ದೆ ಮತ್ತು ಮೀಸಲಾತಿ ಇದ್ದೇ ಇರುತ್ತದೆ ಎಂದಿದ್ದಾರೆ. ಜತೆಗೆ, ರಮಣ್ಸಿಂಗ್ ಸರಕಾರ ಅಧಿಕಾರ ಉಳಿಸಿಕೊಳ್ಳಲಿದೆ. 90 ಸ್ಥಾನಗಳ ಪೈಕಿ ಬಿಜೆಪಿ 65ರಲ್ಲಿ ಗೆಲುವು ಸಾಧಿಸಲಿದೆ ಎಂದೂ ವಿಶ್ವಾಸ ವ್ಯಕ್ತಪಡಿಸಿದ್ದಾರೆ.