ಸಿಬಿಐ, ಇಡಿ ವಿರುದ್ಧ ಸುಪ್ರೀಂ ಮೊರೆ ಹೋದ ಚಿದಂಬರಂ
Team Udayavani, Feb 25, 2018, 8:15 AM IST
ಹೊಸದಿಲ್ಲಿ: ಕೇಂದ್ರೀಯ ತನಿಖಾ ಸಂಸ್ಥೆ (ಸಿಬಿಐ) ಹಾಗೂ ಜಾರಿ ನಿರ್ದೇಶನಾಲಯ (ಇಡಿ)ದಿಂದ ತಮ್ಮ ಹಾಗೂ ತಮ್ಮ ಪುತ್ರನ ಸಾಂವಿಧಾನಿಕ ಮೂಲಭೂತ ಹಕ್ಕುಗಳನ್ನು ರಕ್ಷಿಸಬೇಕೆಂದು ಕೇಂದ್ರದ ಮಾಜಿ ವಿತ್ತ ಸಚಿವ ಪಿ. ಚಿದಂಬರಂ ಸುಪ್ರೀಂ ಕೋರ್ಟ್ಗೆ ಮನವಿ ಮಾಡಿದ್ದಾರೆ.
ಮನವಿಯಲ್ಲಿ ಚಿದಂಬರಂ ಅವರು, “”ಏರ್ಟೆಲ್-ಮ್ಯಾಕ್ಸಿಸ್ ಹಾಗೂ ಐಎನ್ಎಕ್ಸ್ ಮೀಡಿಯಾ ಹಗರಣ ಪ್ರಕರಣಗಳಲ್ಲಿನ ತನಿಖೆ ಹೆಸರಿನಲ್ಲಿ ಸಿಬಿಐ ಹಾಗೂ ಇಡಿ “ರಾಜಕೀಯ ಸೇಡು’ ತೀರಿಸಿಕೊಳ್ಳುತ್ತಿವೆ. ನಮ್ಮ ಮನೆಗಳನ್ನು ಲೆಕ್ಕವಿಲ್ಲದಷ್ಟು ಬಾರಿ ಪರಿಶೀಲನೆ ನಡೆಸಲಾಗಿದ್ದು, ಪದೇ ಪದೆ ತಮ್ಮನ್ನು, ಪುತ್ರನನ್ನು ಹಾಗೂ ಮನೆಯ ಇತರ ಸದಸ್ಯರನ್ನು ಗಂಟೆಗಟ್ಟಲೆ ವಿಚಾರಣೆ ನಡೆಸಲಾಗುತ್ತಿದೆ. ಪದೇ ಪದೆ ಸಮನ್ಸ್ ಕಳಿಸಿ ಕಿರುಕುಳ ನೀಡಲಾಗುತ್ತಿದೆ. ನಮ್ಮ ಕುಟುಂಬದ ಆಪ್ತರನ್ನೂ ಅನಾವಶ್ಯಕ ವಿಚಾರಣೆ ಗೊಳಪಡಿಸಲಾಗಿದೆ” ಎಂದಿದ್ದಾರೆ. ಈ ನಡೆಯಿಂದಾಗಿ, ತಮ್ಮ ಮೂಲಭೂತ ಹಕ್ಕುಗಳ ಪರಿಚ್ಛೇದ 14 (ಕಾನೂನಿನ ಮುಂದೆ ಸಮಾನತೆ), ಪರಿಚ್ಛೇದ 19 (ಅಭಿವ್ಯಕ್ತಿ ಸ್ವಾತಂತ್ರ್ಯ) ಹಾಗೂ ಪರಿಚ್ಛೇದ 21ಕ್ಕೆ (ಸ್ವತಂತ್ರವಾಗಿ ಜೀವಿಸುವ ಹಕ್ಕು) ಚ್ಯುತಿ ತಂದಿದೆ ಎಂದು ಅವರು ವಾದಿಸಿದ್ದಾರೆ.