ಒಡಿಶಾ: ಸಿಡಿಲಾಘಾತಕ್ಕೆ ಮೃತಪಟ್ಟ 18 ಮಂದಿ ಕುಟುಂಬಕ್ಕೆ ತಲಾ 4 ಲಕ್ಷ
Team Udayavani, Jul 31, 2017, 4:51 PM IST
ಭುವನೇಶ್ವರ : ಸಿಡಿಲಾಘಾತಕ್ಕೆ ಗುರಿಯಾಗಿ ಪ್ರಾಣ ಕಳೆದುಕೊಂಡ 18 ಮಂದಿಯ ಕುಟುಂಬಕ್ಕೆ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ಟನಾಯಕ್ ಅವರು ಇಂದು ಸೋಮವಾರ ತಲಾ ನಾಲ್ಕು ಲಕ್ಷ ರೂ.ಗಳ ಪರಿಹಾರ ಘೋಷಿಸಿದರು.
ನಿನ್ನೆ ಭಾನುವಾರ ಸಂಜೆಯ ವರೆಗೂ ಸಿಡಿಲಾಘಾತಕ್ಕೆ ಗುರಿಯಾಗಿ ಮೃತಪಟ್ಟವರ ಸಂಖ್ಯೆ 11 ಎಂದು ವರದಿಯಾಗಿತ್ತು. ಆದರೆ ಇಂದು ಮುಖ್ಯಮಂತ್ರಿಗಳ ಕಾರ್ಯಾಲಯ ಬಿಡುಗಡೆ ಮಾಡಿದ ಪ್ರಕಟನೆಯಲ್ಲಿ ಮೃತರ ಸಂಖ್ಯೆ 18 ಎಂದು ತಿಳಿಸಲಾಗಿದೆ.
ಮುಖ್ಯಮಂತ್ರಿಗಳ ಕಾರ್ಯಾಲಯದ ಪ್ರಕಟನೆ ಪ್ರಕಾರ 5 ಮಂದಿ ಭದ್ರಾಕ್ನಲ್ಲಿ, ನಾಲ್ಕು ಮಂದಿ ಬಾಲಸೋರ್ನಲ್ಲಿ, ಮೂವರು ಕೇಂದ್ರಪಾರಾದಲ್ಲಿ, ಇಬ್ಬರು ಮಯೂರ್ಭಂಜ್ನಲ್ಲಿ ಮತ್ತು ತಲಾ ಒಬ್ಬರು ಕೇಂಜಹಾರ್, ಅಂಗೂಲ್, ಸುಂದರಗಢ ಮತ್ತು ಗಂಜಾಮ್ ಜಿಲ್ಲೆಗಳಲ್ಲಿ ಸಿಡಿಲಾಘಾತಕ್ಕೆ ಮೃತಪಟ್ಟಿದ್ದಾರೆ.
ಮೃತರಲ್ಲಿ ಹೆಚ್ಚಿನವರು ಹೊಲಗದ್ದೆಗಳಲ್ಲಿ ಕೆಲಸ ಮಾಡುವಾಗ ಸಿಡಿಲಾಘಾತಕ್ಕೆ ಗುರಿಯಾಗಿ ಮೃತಪಟ್ಟಿದ್ದಾರೆ.