ಇಂದು ಶಶಿಕಲಾ ಶರಣಾಗತಿ ಅನುಮಾನ?; 4 ವರ್ಷ ಜೈಲು, 10 ಕೋಟಿ ದಂಡ
Team Udayavani, Feb 14, 2017, 11:15 AM IST
ಚೆನ್ನೈ: ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ವಿಕೆ ಶಶಿಕಲಾ ನಟರಾಜನ್ ದೋಷಿ ಎಂದು ಸುಪ್ರೀಂಕೋರ್ಟ್ ದ್ವಿಸದಸ್ಯ ಪೀಠ ಮಂಗಳವಾರ ತೀರ್ಪು ಪ್ರಕಟಿಸಿದ ಬೆನ್ನಲ್ಲೇ ತಮಿಳುನಾಡು ಪೊಲೀಸರು ಕೋವತ್ತೂರು ಗೋಲ್ಡನ್ ಬೇ ರೆಸಾರ್ಟ್ ನಲ್ಲಿ ಠಿಕಾಣಿ ಹೂಡಿರುವ ಶಶಿಕಲಾ ಬಂಧನಕ್ಕಾಗಿ ತೆರಳಿದ್ದರು ಎಂದು ಮಾಧ್ಯಮ ವರದಿ ತಿಳಿಸಿತ್ತು. ಆದರೆ ಇಂದು ಶಶಿಕಲಾ ಕೋರ್ಟ್ ಮುಂದೆ ಶರಣಾಗುವುದು ಅನುಮಾನ ಎಂದು ಹೇಳಲಾಗುತ್ತಿದ್ದು, ಈ ಬಗ್ಗೆ ಶಶಿಕಲಾ ಪರ ವಕೀಲರು ತಜ್ಞರ ಜೊತೆ ಚರ್ಚೆ ನಡೆಸುತ್ತಿದ್ದಾರೆಂದು ವರದಿ ತಿಳಿಸಿದೆ.
ಜಯಲಲಿತಾ ನಿಧನದ ನಂತರ ಮುಖ್ಯಮಂತ್ರಿ ಗಾದಿ ಮೇಲೆ ಕಣ್ಣಿಟ್ಟಿದ್ದ ಶಶಿಕಲಾ ಕಳೆದ 8 ದಿನಗಳಿಂದ ತಮಿಳುನಾಡಿನ ರಾಜಕಾರಣದಲ್ಲಿ ಹೈವೋಲ್ಟೇಜ್ ಡ್ರಾ ಸೃಷ್ಟಿಸಿದ್ದರು. ಇದೀಗ ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಶಶಿಕಲಾಗೆ 4 ವರ್ಷ ಜೈಲುಶಿಕ್ಷೆ, 10 ಕೋಟಿ ರೂಪಾಯಿ ದಂಡ ವಿಧಿಸಿದೆ. ಅಲ್ಲದೇ 10 ವರ್ಷಗಳ ಕಾಲ ಚುನಾವಣೆಗೆ ಸ್ಪರ್ಧಿಸದಂತಾಗಿದೆ.
ತಕ್ಷಣವೇ ಶಶಿಕಲಾ ಬೆಂಗಳೂರಿನ ಕೋರ್ಟ್ ಗೆ ಶರಣಾಗಬೇಕು:
ಬೆಂಗಳೂರು ವಿಶೇಷ ಕೋರ್ಟ್ ಗೆ ಶಶಿಕಲಾ ನಟರಾಜನ್ ಕೂಡಲೇ ಶರಣಾಗಬೇಕು ಎಂದು ಸುಪ್ರೀಂಕೋರ್ಟ್ ಪೀಠ ಸೂಚಿಸಿದೆ. ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಸುಧಾಕರನ್, ಇಳವರಸಿ ಕೂಡಾ ಅಪರಾಧಿಗಳಾಗಿದ್ದು, ಇವರು ಕೂಡಾ ಉಳಿದ ಜೈಲು ಶಿಕ್ಷೆ ಅನುಭವಿಸಬೇಕಾಗಿದೆ.
ಜಯಲಲಿತಾ ಅವರು ನಿಧನರಾಗಿದ್ದರಿಂದ ಅವರ ವಿರುದ್ಧದ ಆರೋಪವನ್ನು ಸುಪ್ರೀಂಕೋರ್ಟ್ ಕೈಬಿಟ್ಟಿರುವುದಾಗಿ ತಿಳಿಸಿದೆ.