ಶಾಂತಿಗಾಗಿ ಆತ್ಮಗೌರವ ಬಲಿ ನೀಡಲ್ಲ
Team Udayavani, Oct 1, 2018, 8:52 AM IST
ಹೊಸದಿಲ್ಲಿ: ಭಾರತ ಶಾಂತಿಯಲ್ಲಿ ನಂಬಿಕೆ ಇರಿಸಿದೆ. ಆದರೆ ಅದಕ್ಕಾಗಿ ಆತ್ಮಗೌರವವನ್ನು ಬಲಿ ಕೊಡಲಾಗುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ರವಿವಾರ 48ನೇ ಆವೃತ್ತಿಯ “ಮನ್ ಕಿ ಬಾತ್’ ಕಾರ್ಯಕ್ರಮದಲ್ಲಿ ಅವರು ಈ ಮಾತುಗಳನ್ನಾಡಿದ್ದು, ಪಾಕಿಸ್ಥಾನಕ್ಕೆ ಪರೋಕ್ಷ ಎಚ್ಚರಿಕೆಯನ್ನು ರವಾನಿಸಿದರು.
2016ರಲ್ಲಿ ಸೈನಿಕರು ನಡೆಸಿದ ಸರ್ಜಿಕಲ್ ದಾಳಿಯನ್ನು ಪ್ರಸ್ತಾವಿಸಿದ ಪ್ರಧಾನಿ ಮೋದಿ “ಪರೋಕ್ಷ ಯುದ್ಧ’ ಮತ್ತು ಉಗ್ರವಾದದ ವಿರುದ್ಧ ಕಠಿನ ಕ್ರಮ ಕೈಗೊಳ್ಳಲಾಗಿದೆ. ಗಡಿಯ ಅಂಚಿನಲ್ಲಿರುವ ಸೈನಿಕರು ಪಾಕಿಸ್ಥಾನದ ಕಿಡಿಗೇಡಿತನಕ್ಕೆ ಕಠಿನ ಉತ್ತರ ನೀಡಲು ನಿರ್ಧರಿಸಿದ್ದಾರೆ. ದೇಶದಲ್ಲಿ ಶಾಂತಿಯುತ ವಾತಾ ವರಣ ಕದಡಲು ಯಾರು ಪ್ರಯತ್ನಿಸುತ್ತಾರೋ ಅಂಥವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸ್ಪಷ್ಟಪಡಿಸಿದರು.
ಭಾರತ ಯಾವತ್ತೂ ಶಾಂತಿಯನ್ನು ಬಯಸು ತ್ತದೆ. ಅದಕ್ಕಾಗಿ ಮುಂಚೂಣಿಯಲ್ಲಿ ನಿಂತು ಕೆಲಸ ಮಾಡುತ್ತದೆ.
ಆದರೆ ಅದಕ್ಕಾಗಿ ನಮ್ಮ ಆತ್ಮಗೌರವ ಮತ್ತು ಸಾರ್ವಭೌಮತ್ವವನ್ನು ಬಲಿ ಕೊಡುವುದಿಲ್ಲ ಎಂದು ಖಡಕ್ಕಾಗಿ ನುಡಿದರು. ಶನಿವಾರ ವಿಶ್ವಸಂಸ್ಥೆಯ 73ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್, ಪಾಕಿಸ್ಥಾನವನ್ನು ಕಠಿನ ಮಾತುಗಳಿಂದ ಟೀಕಿಸಿದ ಬೆನ್ನಲ್ಲೇ ಪ್ರಧಾನಿ ಮೋದಿ ಯವರಿಂದಲೂ ಪಾಕಿಸ್ಥಾನಕ್ಕೆ ಇಂಥದ್ದೇ ಸ್ಪಷ್ಟ ಎಚ್ಚರಿಕೆ ಸಂದೇಶ ರವಾನೆಯಾದಂತಾಗಿದೆ.
ಇದೇ ವೇಳೆ, ವಿಶ್ವಸಂಸ್ಥೆಯ ಶಾಂತಿ ಪಾಲನಾ ಪಡೆಗೆ ಭಾರತವು ಅತ್ಯಂತ ಹೆಚ್ಚಿನ ಕೊಡುಗೆ ನೀಡಿದೆ ಎಂದೂ ಮೋದಿ ಹೇಳಿದರು.
ಸಮಾಜ ಮಾನವ ಹಕ್ಕುಗಳ ಮಹತ್ವ ಅರಿಯ ಬೇಕು ಮತ್ತು ಅದನ್ನು ಪಾಲನೆ ಮಾಡಬೇಕು ಎಂದರು ಮೋದಿ. ಮಾನವ ಹಕ್ಕುಗಳ ಪಾಲನೆಯೇ “ಸಬ್ಕಾ ಸಾಥ್; ಸಬ್ ಕಾ ವಿಕಾಸ್’ ಎಂಬ ಪದದ ಮೂಲ ಧ್ಯೇಯವಾಗಿದೆ ಎಂದರು.
ಮಹಾತ್ಮಾ ಗಾಂಧಿಗೆ ಗೌರವ
ಎಲ್ಲರನ್ನೂ ಒಳಗೊಂಡ ಬೆಳವಣಿಗೆ ಮಹಾತ್ಮಾ ಗಾಂಧಿಯವರಿಗೆ ನಾವು ನೀಡುವ ಗೌರವ. ಯಾರಾದರೊಬ್ಬರು ಒಂದು ವಸ್ತು ಖರೀದಿಸಿದರೆ ಅದರಿಂದ ಉಂಟಾಗುವ ಲಾಭ ಅಗತ್ಯ ಇರುವವರಿಗೆ ತಲುಪಬೇಕು ಎಂದೂ ಮೋದಿ ಹೇಳಿದರು.
ವಾಯುಗಡಿ ಉಲ್ಲಂ ಸಿದ ಪಾಕ್ ಕಾಪ್ಟರ್
ಹೊಡೆದುರುಳಿಸಲು ಯತ್ನಿಸಿದ ಭಾರತೀಯ ಸೇನೆ
ಶ್ರೀನಗರ: ವಿಶ್ವಸಂಸ್ಥೆಯಲ್ಲಿ ಕಾಶ್ಮೀರ ವಿಷಯವನ್ನು ಪ್ರಸ್ತಾವಿಸಿ ತೀವ್ರ ಮುಖಭಂಗ ಎದುರಿಸಿದ ಪಾಕಿಸ್ಥಾನ ರವಿವಾರ ಭಾರತದ ವಾಯುಗಡಿಯನ್ನು ಉಲ್ಲಂ ಸಿದೆ.
ಪಾಕ್ ಹೆಲಿಕಾಪ್ಟರ್ ಜಮ್ಮು-ಕಾಶ್ಮೀರದ ಪೂಂಛ… ಭಾಗದಲ್ಲಿ ಗಡಿಯೊಳಕ್ಕೆ ಸುಮಾರು 700 ಮೀ. ಒಳಗಡೆವರೆಗೆ ಆಗಮಿಸಿತ್ತು. ಮಧ್ಯಾಹ್ನ ಸುಮಾರು 12.13ಕ್ಕೆ ಹೆಲಿಕಾಪ್ಟರ್ ಭಾರತದ ವಾಯುಗಡಿಯಲ್ಲಿ ಹಾರಾಟ ನಡೆಸಿದ್ದು, ಕಂಡುಬರುತ್ತಿದ್ದಂತೆಯೇ ಯೋಧರು ಅದನ್ನು ಹೊಡೆದುರುಳಿಸಲು ಯತ್ನಿಸಿದರು. ಆರಂಭದಲ್ಲಿ ಕಡಿಮೆ ತೀವ್ರತೆಯ ಶಸ್ತ್ರಾಸ್ತ್ರ ಬಳಸಿ ಗುಂಡಿನ ದಾಳಿ ನಡೆಸುತ್ತಿದ್ದಂತೆಯೇ ಕಾಪ್ಟರ್ ವಾಪಸಾಗಿದೆ.
ಇದು ಸಿವಿಲ್ ಕಾಪ್ಟರ್ ಎಂದು ಹೇಳಲಾಗಿದೆ. ಗಡಿಯಲ್ಲಿ ನ್ಯಾವಿಗೇಶನ್ ಸೌಲಭ್ಯ ಕೆಲಸ ಮಾಡದೇ ಇದ್ದಾಗ ಇಂತಹ ಘಟನೆ ಆಗಿದ್ದಿರಬಹುದು ಎಂದು ನಿವೃತ್ತ ಮೇಜರ್ ಅಶ್ವನಿ ಸಿವಚ್ ಹೇಳಿದ್ದಾರೆ.