ಎನ್ಕೌಂಟರ್ಗೆ ಏಳು ನಕ್ಸಲರು ಬಲಿ
Team Udayavani, Jul 28, 2019, 5:39 AM IST
ರಾಯ್ಪುರ: ಛತ್ತೀಸ್ಗಢದ ಬಸ್ತಾರ್ನಲ್ಲಿ ನಕ್ಸಲರು ಮತ್ತು ಪೊಲೀಸರ ನಡುವೆ ಶನಿವಾರ ನಡೆದ ಗುಂಡಿನ ಚಕಮಕಿಯಲ್ಲಿ ಮೂವರು ಮಹಿಳೆಯರ ಸಹಿತ ಏಳು ಮಂದಿ ನಕ್ಸಲರನ್ನು ಹತ್ಯೆಗೈಯ್ಯಲಾಗಿದೆ.
ಒಡಿಶಾ ರಾಜ್ಯಕ್ಕೆ ಹೊಂದಿಕೊಂಡಿರುವ ಗಡಿ ಪ್ರದೇಶ ವಾಗಿರುವ ಬಸ್ತಾರ್ ಜಿಲ್ಲೆಯ ತಿರಿಯಾ ಗ್ರಾಮದ ಅರಣ್ಯ ಪ್ರದೇಶದಲ್ಲಿ ಶನಿವಾರ ಬೆಳಗ್ಗೆ ನಾಲ್ಕು ಗಂಟೆಗೆ ಈ ಕಾಳಗ ನಡೆದಿದೆ ಎಂದು ನಕ್ಸಲ್ ನಿಗ್ರಹ ಕಾರ್ಯಾಚರಣೆ ಪಡೆಯ ಡಿಜಿಪಿ ಸುಂದರ ರಾಜ್ ಮಾಹಿತಿ ನೀಡಿದ್ದಾರೆ.
ಛತ್ತೀಸ್ಗಢದ ಪೊಲೀಸ್ ಇಲಾಖೆಯ ವಿಶೇಷ ತಂಡ ಮತ್ತು ಜಿಲ್ಲಾ ಮೀಸಲು ಯೋಧರ ತಂಡ ಒಡಿಶಾ-ಛತ್ತೀಸ್ಗಢ ಗಡಿಯ ಅಂಚಿನಲ್ಲಿರುವ ಅರಣ್ಯದಲ್ಲಿ ಶೋಧ ಕಾರ್ಯ ನಡೆಸುತ್ತಿತ್ತು. ತಿರಿಯಾ ಎಂಬ ಪ್ರದೇಶದಲ್ಲಿ ಅವರು ಸಂಚರಿಸುತ್ತಿದ್ದಂತೆ ನಕ್ಸಲರಿಂದ ಏಕಾಏಕಿ ಗುಂಡಿನ ದಾಳಿ ನಡೆಯಿತು. ಪೊಲೀಸರೂ ಗುಂಡಿನ ತಕ್ಕ ಪ್ರತ್ಯುತ್ತರ ನೀಡಿದರು. ಬಂದೂಕಿನ ನಳಿಕೆಗಳು ಸ್ತಬ್ಧವಾಗಿ ಪರಿಸ್ಥಿತಿಯ ಪರಿಶೀಲನೆ ನಡೆಸಿದಾಗ ಮೂವರು ಮಹಿಳೆಯರ ಸಹಿತ ಏಳು ಮಂದಿ ನಕ್ಸಲರು ಗುಂಡೇಟಿನಿಂದ ಮೃತಪಟ್ಟಿರುವುದು ದೃಢಪಟ್ಟಿದೆ.
ಘಟನೆ ನಡೆದಿರುವ ಸ್ಥಳದಿಂದ ಹತರಾದ ನಕ್ಸಲರಿಗೆ ಸೇರಿದ ಒಂದು ಇನ್ಸಾಸ್ ರೈಫಲ್, ನಾಲ್ಕು .303 ರೈಫಲ್ಗಳು ಮತ್ತು ಇತರ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.