World Cup ಮೈದಾನಕ್ಕೆ ನುಗ್ಗಿದವನಿಗೆ ಬಹುಮಾನ ಘೋಷಿಸಿದ ಉಗ್ರ!
Team Udayavani, Nov 20, 2023, 10:25 PM IST
ನವದೆಹಲಿ: ವಿಶ್ವಕಪ್ ಪಂದ್ಯದ ವೇಳೆ ಪ್ಯಾಲೆಸ್ತೀನ್ ಪರ ಟೀಶರ್ಟ್ ತೊಟ್ಟು ಮೈದಾನಕ್ಕೆ ನುಗ್ಗಿ ಭದ್ರತೆ ಉಲ್ಲಂ ಸಿದ ಆಸ್ಟ್ರೇಲಿಯನ್ ಪ್ರಜೆ ವೆನ್ ಜಾನ್ಸನ್ಗೆ ಖಲಿಸ್ತಾನಿ ಉಗ್ರ ಗುರುಪತ್ವಂತ್ ಸಿಂಗ್ ಪನ್ನುನ್ ಬಹುಮಾನ ಘೋಷಿಸಿದ್ದಾನೆ.
ನಿಷೇಧಿತ ಉಗ್ರಸಂಘಟನೆ ಸಿಖ್ ಫಾರ್ ಜಸ್ಟೀಸ್ (ಎಸ್ಎಫ್ಜೆ) ಮುಖ್ಯಸ್ಥ ಪನ್ನುನ್, ವೆನ್ ಜಾನ್ಸನ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಆತನಿಗೆ 10,000 ಡಾಲರ್ ನೀಡುವುದಾಗಿ ಘೋಷಿಸಿದ್ದಾನೆ.
ಈ ಮೂಲಕ ಘಟನೆಗೂ- ತಮಗೂ ಸಂಬಂಧವಿದೆ ಎನ್ನುವಂತೆ ಬಿಂಬಿಸಲು ಯತ್ನಿಸಿದ್ದಾನೆ. ಆದರೆ, ಈ ಬಗ್ಗೆ ಭಾರತದ ಗುಪ್ತಚರ ಸಂಸ್ಥೆಗಳು ಪ್ರತಿಕ್ರಿಯಿಸಿ, ಘಟನೆಗೂ ಎಸ್ಎಫ್ಜೆಗೂ ಯಾವುದೇ ಸಂಬಂಧವಿಲ್ಲ, ಇಂಥ ಘಟನೆಗಳ ಹೊಣೆ ಹೊತ್ತುಕೊಳ್ಳುವ ಮೂಲಕ ಪ್ರಚಾರ ಗಳಿಸಲು ಯತ್ನಿಸುವುದು ಪನ್ನುನ್ನ ಚಾಳಿಯಾಗಿದೆ ಎಂದಿದೆ. ಮೈದಾನಕ್ಕೆ ನುಗ್ಗಿದ ವೆನ್ನನ್ನು ಬಂಧಿಸಲಾಗಿದ್ದು, ಆತ ಕೊಹ್ಲಿಯನ್ನು ಭೇಟಿಯಾಗುವ ಹಾಗೂ ಪ್ಯಾಲೆಸ್ತೀನ್ ಪರ ನಿಲುವು ತಿಳಿಸುವ ಉದ್ದೇಶ ಹೊಂದಿದ್ದಾಗಿ ಹೇಳಿಕೊಂಡಿದ್ದಾನೆ.
ಏತನ್ಮಧ್ಯೆ, ಸಿಖ್ಖರು ಏರ್ಇಂಡಿಯಾ ವಿಮಾನಗಳಲ್ಲಿ ಪ್ರಯಾಣಿಸಬೇಡಿ, ಜೀವಕ್ಕೆ ಸಂಚಕಾರವಿದೆ ಎಂದು ಎಚ್ಚರಿಸುವ ಮೂಲಕ ವಿಧ್ವಂಸಕ¬ ಕೃತ್ಯದ ಬೆದರಿಕೆಯೊಡ್ಡಿದ ಪನ್ನುನ್ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆಯನ್ವಯ ಸೋಮವಾರ ಪ್ರಕರಣ ದಾಖಲಿಸಲಾಗಿದೆ.