ಮುಂಬೈ ಹೋಟೆಲ್ಗೆ ಮುತ್ತಿಗೆ ಯತ್ನ
Team Udayavani, Jul 24, 2019, 3:05 AM IST
ಮುಂಬೈ: ಅತೃಪ್ತ ಕಾಂಗ್ರೆಸ್-ಜೆಡಿಎಸ್ ಶಾಸಕರು ತಂಗಿರುವ ಮುಂಬೈನ ಪಂಚತಾರಾ ಹೋಟೆಲ್ ಮುಂದೆ ಮಂಗಳವಾರ ಕಾಂಗ್ರೆಸ್ ಕಾರ್ಯಕರ್ತರು ಭಾರೀ ಪ್ರತಿಭಟನೆ ನಡೆಸಿದ್ದಾರೆ. ಅತೃಪ್ತ ಶಾಸಕರನ್ನು ಭೇಟಿಯಾಗಲು ಯುವ ಕಾಂಗ್ರೆಸ್ ಕಾರ್ಯಕರ್ತರು ಯತ್ನಿಸಿದ್ದು, ಘೋಷಣೆಗಳನ್ನು ಕೂಗುತ್ತಾ ಹೋಟೆಲ್ಗೆ ಮುತ್ತಿಗೆ ಹಾಕಲು ಮುಂದಾದರು.
ಈ ವೇಳೆ ಅವರನ್ನು ತಡೆದ ಪೊಲೀಸರು, ಪ್ರತಿಭಟನಾಕಾರರನ್ನು ವಶಕ್ಕೆ ಪಡೆದುಕೊಂಡರು. ಹೋಟೆಲ್ ಸಾರ್ವಜನಿಕ ಸ್ಥಳವಾಗಿದ್ದು, ನಾವು ಕರ್ನಾಟಕದ ಶಾಸಕರನ್ನು ಭೇಟಿಯಾಗಲು ಬಂದಿದ್ದೇವೆ. ಆರಂಭದಲ್ಲಿ ನಮಗೆ ಹೋಟೆಲ್ನೊಳಕ್ಕೆ ಪ್ರವೇಶಿಸಲು ಅನುಮತಿ ನೀಡಲಾಯಿತು. ಆದರೆ, ನಾವು ಯಾವಾಗ ಹೋಟೆಲ್ನೊಳಕ್ಕೆ ಪ್ರವೇಶಿಸಿದೆವೋ, ಅಷ್ಟರಲ್ಲಿ ನಮ್ಮನ್ನು ಪೊಲೀಸರು ವಶಕ್ಕೆ ಪಡೆದರು.
ಆರ್ಥರ್ ರಸ್ತೆ ಅಥವಾ ತಿಹಾರ್ ಜೈಲಿನಲ್ಲಿ ಭದ್ರತೆಗೆ ನಿಯೋಜಿಸಲಾದ ಭದ್ರತಾ ಸಿಬ್ಬಂದಿಗಿಂತಲೂ ಹೆಚ್ಚಿನ ಪೊಲೀಸ್ ಭದ್ರತೆಯನ್ನು ಈ ಹೋಟೆಲ್ಗೆ ನೀಡಲಾಗಿದೆ. ಇಂಥದ್ದೊಂದು ವೈಭವೋಪೇತ ಪಂಚತಾರಾ ಹೋಟೆಲ್ನಲ್ಲಿ ತಂಗಲು ಈ ಶಾಸಕರ ವಸತಿ ವೆಚ್ಚ, ಆಹಾರದ ವೆಚ್ಚವನ್ನು ಭರಿಸುತ್ತಿರುವವರು ಯಾರು ಎಂಬುದು ನಮಗೆ ಗೊತ್ತಾಗಬೇಕು ಎಂದು ಮುಂಬೈ ಯುವ ಕಾಂಗ್ರೆಸ್ ಉಪಾಧ್ಯಕ್ಷ ಸೂರಜ್ ಸಿಂಗ್ ಠಾಕೂರ್ ಒತ್ತಾಯಿಸಿದ್ದಾರೆ.